ADVERTISEMENT

ಕಾಣಿಕೆ ಹುಂಡಿ ಇಲ್ಲದಿದ್ದರೆ ದೇಗುಲದಲ್ಲಿ ಪೂಜಾರಿಗಳು ಇರಲ್ಲ: ವಿರೋಧ ಪಕ್ಷದ ನಾಯಕ

ಮಹಾರಾಷ್ಟ್ರ ವಿರೋಧ ಪಕ್ಷದ ನಾಯಕ ವಿಜಯ್‌ ಹೇಳಿಕೆ

ಪಿಟಿಐ
Published 20 ನವೆಂಬರ್ 2023, 16:14 IST
Last Updated 20 ನವೆಂಬರ್ 2023, 16:14 IST
<div class="paragraphs"><p>ಕಾಣಿಕೆ ಹುಂಡಿ ಹಣ</p></div>

ಕಾಣಿಕೆ ಹುಂಡಿ ಹಣ

   

ನಾಗ್ಪುರ: ‘ದೇಗುಲಗಳಲ್ಲಿ ಕಾಣಿಕೆ ಹುಂಡಿಗಳು ಇರುವುದರಿಂದ ಅಲ್ಲಿ ಪೂಜಾರಿಗಳು ನೆಲೆಯೂರಿದ್ದಾರೆ. ಒಂದು ವೇಳೆ ಅವುಗಳನ್ನು ಅಲ್ಲಿಂದ ತೆಗೆದುಹಾಕಿದರೆ ದೇವಸ್ಥಾನದಲ್ಲಿ ಅವರು ಪೂಜೆಯನ್ನೂ ಪರಿತ್ಯಜಿಸುತ್ತಾರೆ’ ಎಂದು ಮಹಾರಾಷ್ಟ್ರ ವಿಧಾನಸಭಾ ವಿರೋಧ ಪಕ್ಷದ ನಾಯಕ ವಿಜಯ್‌ ವಡೆಟ್ಟಿವಾರ್‌ ನೀಡಿರುವ ಹೇಳಿಕೆಯು ವಿವಾದಕ್ಕೆ ಕಾರಣವಾಗಿದೆ.

ಪರ್ಭಾನಿ ನಗರದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಕಾಂಗ್ರೆಸ್‌ ಮುಖಂಡ ವಿಜಯ್‌, ‘ಹುಂಡಿಗಳನ್ನು ತೆಗೆದುಹಾಕಿದರೆ ಅಲ್ಲಿ ಪಂಡಿತರು ಉಳಿಯಲು ಇಚ್ಛಿಸುವುದಿಲ್ಲ. ದೇವಸ್ಥಾನಗಳಿಂದ ಅವರು ಕಣ್ಮರೆಯಾಗುತ್ತಾರೆ. ಕೇವಲ ದೇವರಷ್ಟೇ ಗರ್ಭಗುಡಿಯಲ್ಲಿ ಉಳಿಯಬೇಕಿದೆ’ ಎಂದು ಹೇಳಿದ್ದಾರೆ.

ADVERTISEMENT

ಬಳಿಕ ಮಾತು ಮುಂದುವರಿಸಿದ್ದ ಅವರು, ‘ಸಂವಿಧಾನ ಶಿಲ್ಪಿ ಡಾ.ಬಿ.ಆರ್‌. ಅಂಬೇಡ್ಕರ್‌ ಅವರು ಒಂದು ವೇಳೆ ಬೌದ್ಧ ಧರ್ಮದ ಬದಲಾಗಿ ಇಸ್ಲಾಂ ಧರ್ಮ ಸ್ವೀಕರಿಸಿದ್ದರೆ ಇಂದಿನ ಪರಿ‌ಸ್ಥಿತಿಯಲ್ಲಿ ಭಾರತವು ಎರಡು ಭಾಗವಾಗಿ ಇಬ್ಭಾಗವಾಗುತ್ತಿತ್ತು. ಧರ್ಮಗಳು ಮತ್ತು ಜಾತಿಗಳ ನಡುವೆ ಸಂಘರ್ಷ ಏರ್ಪಡುತ್ತಿತ್ತು’ ಎಂದಿದ್ದಾರೆ.

‘ಕೇಂದ್ರದಲ್ಲಿ ಅಧಿಕಾರ ಹಿಡಿದಿರುವವರ ಸಿದ್ಧಾಂತವು ದೇಶವನ್ನು ಇಬ್ಭಾಗಿಸುತ್ತಿದೆ. ಅಂಬೇಡ್ಕರ್‌ ಅವರು ಇಸ್ಲಾಂ ಧರ್ಮ ಸ್ವೀಕರಿಸಿದ್ದರೆ ಈ ಅಧಿಕಾರಸ್ಥರು ಸಮಾಜದಲ್ಲಿ ದ್ವೇಷ ಬಿತ್ತುತ್ತಿದ್ದರು. ಇದರಿಂದ ದೇಶವು ಎರಡು ಹೋಳಾಗುತ್ತಿತ್ತು. ಹಲವು ಸಾಹಿತಿಗಳು ಕೂಡ ಇದನ್ನೇ ಪ್ರತಿಪಾದಿಸಿದ್ದಾರೆ’ ಎಂದು ವಿಜಯ್‌ ಹೇಳಿದ್ದಾರೆ.

‘ಆದರೆ, ಅಂಬೇಡ್ಕರ್‌ ಅವರ ಸಿದ್ಧಾಂತವು ದೇಶದ ಶಾಂತಿ ಮತ್ತು ಅಭ್ಯುದಯವನ್ನು ಪ್ರತಿಪಾದಿಸುತ್ತದೆ. ಅದಕ್ಕಾಗಿಯೇ ಅವರು ಬೌದ್ಧ ಧರ್ಮ ಸ್ವೀಕರಿಸಿದರು. ಇದನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ’ ಎಂದು ಎಂದಿದ್ದಾರೆ.

ಈ ಹೇಳಿಕೆ ಬಗ್ಗೆ ಸೋಮವಾರ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ‘ನಾನು ಹೇಳಿರುವುದರಲ್ಲಿ ತಪ್ಪೇನಿದೆ’ ಎಂದು ಸಮರ್ಥಿಸಿಕೊಂಡರು. 

‘ಪ್ರಸ್ತುತ ಸಮಾಜದಲ್ಲಿ ದ್ವೇಷಮಯ ವಾತಾವರಣವಿದೆ. ಹಾಗಾಗಿ, ಇಂದಿನ ಪರಿಸ್ಥಿತಿಗೆ ತಕ್ಕಂತೆ ನಾನು ಹೇಳಿರುವ ಹೇಳಿಕೆಯೂ ಸರಿಯಾಗಿಯೇ ಇದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.