ADVERTISEMENT

ನೆಹರೂ ಉಪನಾಮ ಏಕೆ ಬಳಸುವುದಿಲ್ಲ?: ಗಾಂಧಿ ಕುಟುಂಬವನ್ನು ಪ್ರಶ್ನಿಸಿದ ಮೋದಿ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2023, 16:15 IST
Last Updated 9 ಫೆಬ್ರುವರಿ 2023, 16:15 IST
   

ನವದೆಹಲಿ: ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಪ್ರಧಾನಿ ನರೇಂದ್ರ ಮೋದಿ ಗುರುವಾರ ರಾಜ್ಯಸಭೆಯಲ್ಲಿ ಉತ್ತರಿಸಿದ್ದು, ಕಾಂಗ್ರೆಸ್ ಮತ್ತು ಗಾಂಧಿ ಕುಟುಂಬವನ್ನು ಗುರಿಯಾಗಿಸಿಕೊಂಡು ನೆಹರೂ ಉಪನಾಮವನ್ನು ಏಕೆ ಬಳಸುವುದಿಲ್ಲ ಎಂದು ಪ್ರಶ್ನಿಸಿದ್ದಾರೆ. 356ನೇ ವಿಧಿಯನ್ನು ಕಾಂಗ್ರೆಸ್ ಹಲವಾರು ಬಾರಿ ದುರುಪಯೋಗಪಡಿಸಿಕೊಂಡಿದೆ ಎಂದು ಅವರು ಟೀಕಿಸಿದ್ದಾರೆ.

‘ಈ ದೇಶದಲ್ಲಿ 600 ಯೋಜನೆಗಳು ಗಾಂಧಿ-ನೆಹರೂ ಕುಟುಂಬದ ಹೆಸರಿನಲ್ಲಿವೆ ಎಂದು ನಾನು ಪತ್ರಿಕೆಗಳಲ್ಲಿ ಓದಿದ್ದೇನೆ. ಆದರೆ, ಒಬ್ಬ ವ್ಯಕ್ತಿ ಸಹ ನೆಹರೂ ಉಪನಾಮವನ್ನು ಏಕೆ ಇಡುವುದಿಲ್ಲ ಎಂದು ನನಗೆ ತುಂಬಾ ಆಶ್ಚರ್ಯವಾಗಿದೆ. ನೆಹರೂ ಅಂತಹ ಖ್ಯಾತ ವ್ಯಕ್ತಿಯಾಗಿದ್ದರೆ ಅವರ ಉಪನಾಮ ಬಳಸುವುದರಿಂದ ಅಪಮಾನವೇನು?’ಎಂದು ಮೋದಿ ಪ್ರಶ್ನಿಸಿದ್ದಾರೆ.

ಯಾವುದೇ ಕಾರ್ಯಕ್ರಮದಲ್ಲಿ ನೆಹರೂ ಅವರ ಹೆಸರನ್ನು ಹೇಳದಿದ್ದರೆ ನಾನು ಕೋಪಗೊಳ್ಳುತ್ತೇನೆ. ಒಂದೊಮ್ಮೆ ನಾನೇ ನೆಹರೂ ಹೆಸರು ತಪ್ಪಿಸಿದರೆ, ಮತ್ತೆ ಸರಿಪಡಿಸಿಕೊಳ್ಳುತ್ತೇನೆ. ಏಕೆಂದರೆ, ಅವರು ಭಾರತದ ಮೊದಲ ಪ್ರಧಾನಿಯಾಗಿದ್ದರು. ಆದರೆ, ಗಾಂಧಿ ಕುಟುಂಬದ ಒಬ್ಬ ವ್ಯಕ್ತಿಯೂ ನೆಹರೂ ಉಪನಾಮವನ್ನು ಏಕೆ ಇಟ್ಟುಕೊಳ್ಳುವುದಿಲ್ಲ ಎನ್ನುವುದು ನನಗೆ ತುಂಬಾ ಅಚ್ಚರಿ ಎನಿಸುತ್ತದೆ ಎಂದು ಅವರು ಹೇಳಿದ್ದಾರೆ.

ADVERTISEMENT

‘ಇದು ಶತಮಾನಗಳಷ್ಟು ಹಳೆಯ ದೇಶ. ಹಲವು ತಲೆಮಾರುಗಳ ಜನರ ಸಂಪ್ರದಾಯಗಳ ಮೇಲೆ ನಿರ್ಮಿಸಲಾದ ದೇಶ. ಈ ದೇಶವು ಯಾವುದೇ ಕುಟುಂಬದ ಆಸ್ತಿಯಲ್ಲ’ ಎಂದು ಮೋದಿ ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮುಂದುವರಿಸಿದ ಅವರು, 356ನೇ ವಿಧಿಯನ್ನು ಹೆಚ್ಚು ದುರ್ಬಳಕೆ ಮಾಡಿಕೊಂಡ ಪಕ್ಷ ಯಾವುದು ಎಂದರೆ ಅದು ಕಾಂಗ್ರೆಸ್. 90 ಬಾರಿ ಅವರು (ಕಾಂಗ್ರೆಸ್) ಚುನಾಯಿತ ಸರ್ಕಾರವನ್ನು ವಜಾ ಮಾಡಿದ್ದಾರೆ ಎಂದು ಮೋದಿ ಟೀಕಿಸಿದ್ದಾರೆ.

ವಿವಾದಗಳನ್ನು ಸೃಷ್ಟಿಸಲು ಸುಳ್ಳನ್ನು ಹರಡುವ ಪ್ರಯತ್ನ ನಡೆಯುತ್ತಿದೆ. ಕಳೆದ 9 ವರ್ಷಗಳಲ್ಲಿ ದೇಶದ ಆರ್ಥಿಕತೆಯು ವಿಸ್ತರಿಸಿದೆ ಮತ್ತು ಹೊಸ ವಲಯದಲ್ಲಿ ಉದ್ಯೋಗದ ಸಾಧ್ಯತೆಗಳನ್ನು ಸೃಷ್ಟಿಸಲಾಗಿದೆ ಎಂದು ಮೋದಿ ಹೇಳಿದ್ದಾರೆ.

ಆಧುನಿಕ ಭಾರತವನ್ನು ನಿರ್ಮಿಸಲು ಅಗತ್ಯ ಮೂಲಸೌಕರ್ಯ ಮತ್ತು ವೇಗದ ಪ್ರಾಮುಖ್ಯತೆಯನ್ನು ನಾವು ಅರ್ಥ ಮಾಡಿಕೊಂಡಿದ್ದೇವೆ ಎಂದು ಪ್ರಧಾನಮಂತ್ರಿ ಹೇಳಿದರು. ತಂತ್ರಜ್ಞಾನದ ಶಕ್ತಿಯಿಂದ ದೇಶದಲ್ಲಿ ಕಾರ್ಮಿಕ ಸಂಸ್ಕೃತಿಯು ರೂಪಾಂತರಗೊಂಡಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.