ADVERTISEMENT

ಮಹಾರಾಷ್ಟ್ರದಲ್ಲಿ ಮೈತ್ರಿ ಸರ್ಕಾರ ರಚನೆ, ಬುಲೆಟ್ ರೈಲು ಯೋಜನೆಗೆ ಬ್ರೇಕ್?

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2019, 9:43 IST
Last Updated 22 ನವೆಂಬರ್ 2019, 9:43 IST
ಪ್ರಧಾನಿ ನರೇಂದ್ರ ಮೋದಿ ಕನಸಿನ ಬುಲೆಟ್ ಟ್ರೈನ್ ಯೋಜನೆಗೆ ಬ್ರೇಕ್?
ಪ್ರಧಾನಿ ನರೇಂದ್ರ ಮೋದಿ ಕನಸಿನ ಬುಲೆಟ್ ಟ್ರೈನ್ ಯೋಜನೆಗೆ ಬ್ರೇಕ್?   

ಮುಂಬೈ: ಒಂದು ವೇಳೆ ಮಹಾರಾಷ್ಟ್ರದಲ್ಲಿ ಶಿವಸೇನಾ, ಎನ್‌ಸಿಪಿ ಮತ್ತು ಕಾಂಗ್ರೆಸ್ ಮೈತ್ರಿ ಸರ್ಕಾರ ರಚನೆಯಾಗಿದ್ದೇ ಆದಲ್ಲಿ ಗುಜರಾತ್‌ನ ಅಹಮದಾಬಾದ್ ಮತ್ತು ಮುಂಬೈ ನಡುವಿನ ಪ್ರಧಾನಿ ನರೇಂದ್ರ ಮೋದಿಯವರ ಬುಲೆಟ್ ರೈಲು ಯೋಜನೆ ರದ್ದುಗೊಳ್ಳಬಹುದು ಎಂದು ಮೂಲಗಳು ತಿಳಿಸಿವೆ.

ಕಾಂಗ್ರೆಸ್‌ನ ಮೂಲಗಳು ಎನ್‍ಡಿಟಿವಿಗೆ ತಿಳಿಸಿರುವಂತೆ, ಶಿವಸೇನಾ, ಎನ್‌ಸಿಪಿ ಮತ್ತು ಕಾಂಗ್ರೆಸ್ ಸರ್ಕಾರ ರಚನೆಗೆ ಕಸರತ್ತು ನಡೆಸುತ್ತಿದ್ದರೆ, ಇತ್ತ ಭಾರತದ ಮೊದಲ ಬುಲೆಟ್ ರೈಲು ಯೋಜನೆ ಸ್ಥಗಿತಗೊಳ್ಳಬಹುದು ಮತ್ತು ಯೋಜನೆಯ ಭಾಗವಾಗಿ ಅಂದಾಜು ಸುಮಾರು ₹ 1 ಲಕ್ಷ ಕೋಟಿ ಹಣಕಾಸಿನ ಹೊಣೆಯಲ್ಲಿ ಮಹಾರಾಷ್ಟ್ರ ಸರ್ಕಾರ ಕೂಡ ವೆಚ್ಚ ಭರಿಸುವ ಹೊಣೆ ಹೊತ್ತುಕೊಂಡಿತ್ತು.

ಒಂದು ವೇಳೆ ಯೋಜನೆಯನ್ನು ಕೈಗೆತ್ತಿಕೊಂಡಿದ್ದೇ ಆದರೆ ಎಲ್ಲ ವೆಚ್ಚವನ್ನು ಕೇಂದ್ರ ಸರ್ಕಾರವೇ ಸಂಪೂರ್ಣವಾಗಿ ಭರಿಸಬೇಕಿದೆ. ಮಹಾರಾಷ್ಟ್ರ ಸರ್ಕಾರವು ಬುಲೆಟ್ ರೈಲು ಯೋಜನೆಯ ವೆಚ್ಚವನ್ನು ಭರಿಸುವುದಿಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ ತಿಳಿಸಿದ್ದಾರೆ.

ADVERTISEMENT

ಎನ್‌ಸಿಪಿಯ ಹಿರಿಯ ನಾಯಕ ಐಎಎನ್‌ಎಸ್‌ನೊಂದಿಗೆ ಮಾತನಾಡಿ, ಕಳೆದ ವಾರ ಮುಂಬೈನಲ್ಲಿ ಮೂರು ಪಕ್ಷಗಳೊಂದಿಗೆ ನಡೆದ ಮೊದಲ ಸಭೆಯಲ್ಲಿ ಅಹಮದಾಬಾದ್ ಮತ್ತು ಮುಂಬೈ ನಡುವಿನ ಬುಲೆಟ್ ರೈಲು ಯೋಜನೆ ವಿಚಾರ ಪ್ರಸ್ತಾಪವಾಗಿದ್ದು, ಕೇಂದ್ರದ ಪ್ರಕಾರ ಈ ಯೋಜನೆಗೆ ಮಹಾರಾಷ್ಟ್ರ ಸರ್ಕಾರ 5 ಸಾವಿರ ಕೋಟಿಗಳನ್ನು ನೀಡಬೇಕಾಗಿದೆ ಎಂಬುದನ್ನು ನಾಯಕರಿಗೆ ತಿಳಿಸಲಾಗಿದೆ ಎಂದರು.

ಅಹಮದಾಬಾದ್‌ ಮತ್ತು ಮುಂಬೈ ನಡುವಣ ಪ್ರಸ್ತಾವಿತ ಬುಲೆಟ್‌ ರೈಲು ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಜಪಾನ್‌ ಪ್ರಧಾನಿ ಶಿಂಜೊ ಅಬೆ ಅವರು ಸೆಪ್ಟೆಂಬರ್‌ 2017ರಲ್ಲಿ ಅಹಮದಾಬಾದ್‌ನಲ್ಲಿ ಶಂಕುಸ್ಥಾಪನೆ ನೆರವೇರಿಸಿದ್ದರು.

508 ಕಿ.ಮೀ ಉದ್ದದ ಅಹಮದಾಬಾದ್-ಮುಂಬೈ ನಡುವಿನ ಗಂಟೆಗೆ 350 ಕಿ.ಮೀ. ವೇಗದಲ್ಲಿ ಚಲಿಸುವ ಹೈ ಸ್ಪೀಡ್ ರೈಲು ಯೋಜನೆಯು 2023ಕ್ಕೆ ಪೂರ್ಣಗೊಳ್ಳುವ ಉದ್ದೇಶವನ್ನು ಹೊಂದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.