ADVERTISEMENT

ಪ್ರಯಾಗರಾಜ್ ಗಲಭೆ ಮಾಸ್ಟರ್‌ಮೈಂಡ್ ಜಾವೇದ್ ಮನೆಯಲ್ಲಿ ಅಕ್ರಮ ಶಸ್ತ್ರಾಸ್ತ್ರ ಪತ್ತೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಜೂನ್ 2022, 16:22 IST
Last Updated 12 ಜೂನ್ 2022, 16:22 IST
ಜಾವೇದ್ ಮನೆ ತೆರವು ಕಾರ್ಯಾಚರಣೆ ಸಂದರ್ಭ
ಜಾವೇದ್ ಮನೆ ತೆರವು ಕಾರ್ಯಾಚರಣೆ ಸಂದರ್ಭ   

ಪ್ರಯಾಗರಾಜ್: ಪ್ರವಾದಿ ಮಹಮ್ಮದ್‌ರ ವಿರುದ್ಧ ನೂಪುರ್ ಶರ್ಮಾ ಹೇಳಿಕೆ ಖಂಡಿಸಿ ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆದಿದ್ದ ವ್ಯಾಪಕ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿರುವ ಜಾವೇದ್‌ ಅಹ್ಮದ್‌ ಅಕ್ರಮ ಮನೆ ತೆರವು ಕಾರ್ಯಾಚರಣೆಯನ್ನು ಭಾನುವಾರ ಅಲ್ಲಿನ ಸ್ಥಳಿಯಾಡಳಿತ ಬುಲ್ಡೊಜರ್ ಮೂಲಕ ನಡೆಸಿದೆ.

ಈ ವೇಳೆ ಗಲಭೆಯ ಮಾಸ್ಟರ್‌ಮೈಂಡ್ ಎಂದು ಹೇಳಲಾದ ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾದ ನಾಯಕ ಜಾವೇದ್ ಅಹಮ್ಮದ್ ಮನೆಯಲ್ಲಿ ಅಕ್ರಮ ಶಸ್ತ್ರಾಸ್ತ್ರಗಳು ಸಿಕ್ಕಿವೆ ಎಂದು ಪ್ರಯಾಗರಾಜ್ ಪೊಲೀಸರು ಹೇಳಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.

ಒಂದು 12 ಬೋರ್ ಪಿಸ್ತೂಲ್ ಹಾಗೂ ಮತ್ತೊಂದು 315 ಬೋರ್ ಪಿಸ್ತೂಲ್ ಸಿಕ್ಕಿದೆ ಎಂದು ಎಸ್‌ಪಿ ಅಜಯ್ ಕುಮಾರ್ ತಿಳಿಸಿದ್ದಾರೆ. ಅಕ್ರಮ ಅಪಾರ್ಟ್‌ಮೆಂಟ್‌ ತೆರವಿನ ಬಗ್ಗೆ ಜಾವೇದ್ ಅವರಿಗೆ ನೋಟಿಸ್ ಕೊಟ್ಟಿದ್ದರೂ ಸಹ ಅವರು ಉತ್ತರ ನೀಡಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಈ ಭದ್ರತೆಗೆ ನೂರಾರು ಪೊಲೀಸರನ್ನು ನಿಯೋಜಿಸಲಾಗಿತ್ತು.

ADVERTISEMENT

ಪ್ರವಾದಿ ಮಹಮ್ಮದ್ ಅವರ ಬಗ್ಗೆ ಬಿಜೆಪಿಯ ನೂಪುರ್ ಶರ್ಮಾ ಹಾಗೂ ನವೀನ್ ಜಿಂದಾಲ್ ಅವರ ಹೇಳಿಕೆ ಖಂಡಿಸಿ ಶುಕ್ರವಾರ ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ವ್ಯಾ‍ಪಕ ಹಿಂಸಾಚಾರ ನಡೆದಿತ್ತು.

‘ಪ್ರಯಾಗರಾಜ್ ಗಲಭೆಯಲ್ಲಿ ಪೊಲೀಸರತ್ತ ಕಲ್ಲೆಸೆಯಲು ಕಿಡಿಗೇಡಿಗಳು ಮಕ್ಕಳನ್ನೂ ಕೂಡ ಬಳಸಿಕೊಂಡಿದ್ದಾರೆ. ಅರೋಪಿಗಳ ವಿರುದ್ಧ ಗೂಂಡಾ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡು, ಅವರ ಆಸ್ತಿ–ಪಾಸ್ತಿ ಜಪ್ತಿ ಮಾಡುವುದಕ್ಕೆ ಕ್ರಮ ಕೈಗೊಳ್ಳಲಾಗುವುದು‘ ಎಂದು ಅಜಯ್ ಕುಮಾರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.