ADVERTISEMENT

'ಜೈಲಿಗೆ ಅಟ್ಟಬೇಕಿದ್ದ ಬಿಜೆಪಿ ಅಜಿತ್‌ರನ್ನು ಡಿಸಿಎಂ ಸ್ಥಾನಕ್ಕೇರಿಸಿದೆ'

ಕಾಂಗ್ರೆಸ್‌ ವಕ್ತಾರ ರಣದೀಪ್ ಸುರ್ಜೇವಾಲಾ ಟೀಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ನವೆಂಬರ್ 2019, 12:02 IST
Last Updated 23 ನವೆಂಬರ್ 2019, 12:02 IST
ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ವಕ್ತಾರ ರಣದೀಪ್ ಸುರ್ಜೇವಾಲಾ
ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ವಕ್ತಾರ ರಣದೀಪ್ ಸುರ್ಜೇವಾಲಾ   

ನವದೆಹಲಿ: 'ರಾಜ್ಯಪಾಲರು ಅಮಿತ್‌ ಶಾ ಅವರ ಹಿಟ್‌ಮ್ಯಾನ್‌ ರೀತಿ ವರ್ತಿಸಿದ್ದಾರೆ' ಎಂದುಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ವಕ್ತಾರ ರಣದೀಪ್ ಸುರ್ಜೇವಾಲಾ ಟೀಕಿಸಿದರು.

ಮಹಾರಾಷ್ಟ್ರದಲ್ಲಿ ಬೆಳಿಗ್ಗೆ ನಡೆದಿರುವ ದಿಢೀರ್‌ ನಾಟಕೀಯ ಬೆಳವಣಿಗೆ ಕುರಿತು ಸುರ್ಜೇವಾಲಾ ಮಾತನಾಡಿದರು.

'ಅವಕಾಶವಾದಿ ಅಜಿತ್‌ ಪವಾರ್‌ಗೆ ಜೈಲಿನ ಭೀತಿ ಮೂಡಿಸಿ ಬಿಜೆಪಿ ಸೆಳೆದುಕೊಂಡಿದೆ. ದುರ್ಯೋಧನ ಮತ್ತು ಶಕುನಿಯ ರೀತಿ ಬಿಜೆಪಿ ಮತ್ತು ಅಜಿತ್‌ ಪವಾರ್‌ ಸೇರಿ ಮಹಾರಾಷ್ಟ್ರ ಜನಾದೇಶವನ್ನು ಹರಣಗೊಳಿಸಿದ್ದಾರೆ' ಎಂದರು.

'72,000 ಕೋಟಿ ಕೃಷಿಹಗರಣದಲ್ಲಿ ಅಜಿತ್‌ ಪವಾರ್‌ನ್ನು ಜೈಲಿಗೆ ಕಳುಹಿಸಲು ಫಡಣವಿಸ್‌ ನೇತೃತ್ವದ ಬಿಜೆಪಿ ಸರ್ಕಾರ ಕ್ರಮವಹಿಸಿತ್ತು. ಆದರೆ, ಅದೇ ಬಿಜೆಪಿ ಹಗರಣಗಳ ಆರೋಪ ಹೊತ್ತಿರುವ ವ್ಯಕ್ತಿಯನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಿ ಸಚಿವಾಲಯಕ್ಕೆ ಕಳುಹಿಸಿದೆ' ಎಂದು ಬಿಜೆಪಿ ವಿರುದ್ಧ ಕುಟುಕಿದರು.

'ಮಹಾರಾಷ್ಟ್ರದ ರಾಜ್ಯಪಾಲರು ಸಂವಿಧಾನ ರಕ್ಷಣೆ ಕಾರ್ಯನಿರ್ವಹಿಸುವುದನ್ನು ಬಿಟ್ಟು ಅಮಿತ್‌ ಶಾ ಅವರ ಹಿಟ್‌ಮ್ಯಾನ್‌ ರೀತಿ ನಡೆದುಕೊಂಡಿದ್ದಾರೆ. ರಾತ್ರಿ ಕಳೆದು ಬೆಳಗಾಗುವ ವೇಳೆಗೆ ಕದ್ದು ಮುಚ್ಚಿ ಪ್ರಮಾಣ ವಚನ ಸ್ವೀಕಾರ ನಡೆಸಲಾಗಿದೆ' ಎಂದು ಸರ್ಜೇವಾಲಾ ಆರೋಪಿಸಿದರು.

'ಸರ್ಕಾರ ರಚನೆಯ ಪ್ರಸ್ತಾಪವನ್ನು ಯಾರು ಮುಂದಿಟ್ಟರು? ಬೆಂಬಲ ವ್ಯಕ್ತಪಡಿಸಿರುವವ ಸಹಿಗಳನ್ನು ರಾಜ್ಯಪಾಲರು ಪರಿಶೀಲಿಸಿದ್ದಾರೆಯೇ?,..' ಎಂದು ಪ್ರಧಾನಿ ಮೋದಿ ಮತ್ತು ಅಮಿತ್‌ ಶಾ ಅವರಿಗೆ ಹಲವು ಪ್ರಶ್ನೆಗಳನ್ನು ತೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.