ADVERTISEMENT

ವರ್ಚುವಲ್ ಪ್ರಮಾಣವಚನ ಆಯೋಜಿಸಿ: ಪಿಣರಾಯಿ ಸರ್ಕಾರಕ್ಕೆ ಐಎಂಎ ಆಗ್ರಹ

​ಪ್ರಜಾವಾಣಿ ವಾರ್ತೆ
Published 15 ಮೇ 2021, 11:44 IST
Last Updated 15 ಮೇ 2021, 11:44 IST
ಪಿಣರಾಯಿ ವಿಜಯನ್‌
ಪಿಣರಾಯಿ ವಿಜಯನ್‌    

ತಿರುವನಂತಪುರ: ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿ ಉಲ್ಬಣಿಸಿರುವ ಹಿನ್ನೆಲೆಯಲ್ಲಿ ಪ್ರಮಾಣವಚನ ಸ್ವೀಕಾರ ಸಮಾರಂಭವನ್ನು ವರ್ಚುವಲ್ ಆಗಿ ನಡೆಸಬೇಕು ಎಂದು ಪಿಣರಾಯಿ ವಿಜಯನ್ ನೇತೃತ್ವದ ಕೇರಳ ಸರ್ಕಾರವನ್ನು ಭಾರತೀಯ ವೈದ್ಯಕೀಯ ಸಂಘಟನೆ (ಐಎಂಎ) ಆಗ್ರಹಿಸಿದೆ.

ರಾಜ್ಯದಲ್ಲಿ ಚುನಾವಣಾ ಪ್ರಚಾರದ ಸಂದರ್ಭ ಅಂತರ ಕಾಯ್ದುಕೊಳ್ಳುವಿಕೆ ಸೇರಿದಂತೆ ಕೋವಿಡ್ ಮಾರ್ಗಸೂಚಿಯ ಉಲ್ಲಂಘನೆ ಮಾಡಿರುವುದು ಸೋಂಕು ಹರಡುವಿಕೆ ಹೆಚ್ಚಾಗಲು ಕಾರಣ. ಚುನಾವಣಾ ಪ್ರಚಾರ ಅಭಿಯಾನಗಳ ವೇಳೆ ಸರಿಯಾಗಿ ಮಾಸ್ಕ್ ಧರಿಸದೆ ಇರುವುದು, ಅಂತರ ಕಾಯ್ದುಕೊಳ್ಳದೆ ಇದ್ದುದು ಸೋಂಕಿನ ಎರಡನೇ ಅಲೆಗೆ ಕಾರಣವಾಗಿದೆ ಎಂದು ಐಎಂಎಯ ರಾಜ್ಯ ಘಟಕ ಅಭಿಪ್ರಾಯಪಟ್ಟಿದೆ.

ಹೊಸ ಸರ್ಕಾರವು ವೈಜ್ಞಾನಿಕ ತಳಹದಿಯಲ್ಲಿ ಮತ್ತು ಜನರ ಸಂಕಷ್ಟವನ್ನು ಅರ್ಥಮಾಡಿಕೊಂಡು ಅಧಿಕಾರಕ್ಕೆ ಬರಲಿ ಎಂದು ಸಂಸ್ಥೆ ಹೇಳಿದೆ. ಪ್ರಮಾಣವಚನ ಸ್ವೀಕಾರ ಸಮಾರಂಭವು ವರ್ಚುವಲ್ ಆಗಿ ನಡೆಯಲಿ. ಜನರು ಗುಂಪುಗೂಡುವುದು ತಪ್ಪಲಿ. ಆ ಮೂಲಕ ಕೋವಿಡ್ ವಿರುದ್ಧದ ಹೋರಾಟಕ್ಕೆ ಸಂಬಂಧಿಸಿ ಪ್ರಬಲ ಸಂದೇಶ ರವಾನೆಯಾಗಲಿ ಎಂದು ಐಎಂಎ ಹೇಳಿದೆ.

ADVERTISEMENT

ಲಾಕ್‌ಡೌನ್‌ ಅನ್ನು ಮೇ 23ರವರೆಗೆ ವಿಸ್ತರಿಸಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ಐಎಂಎ ಸ್ವಾಗತಿಸಿದೆ.

ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಜಯಗಳಿಸುವ ಮೂಲಕ ಪಿಣರಾಯಿ ವಿಜಯನ್ ನೇತೃತ್ವದ ಎಲ್‌ಡಿಎಫ್ ಸರ್ಕಾರ ಅಧಿಕಾರವನ್ನು ಉಳಿಸಿಕೊಂಡಿದೆ. ಮತ್ತೊಂದು ಅವಧಿಗೆ ಮುಖ್ಯಮಂತ್ರಿಯಾಗಿ ಪಿಣರಾಯಿ ವಿಜಯನ್ ಮತ್ತು ಅವರ ಸಂಪುಟ ಸಹೋದ್ಯೋಗಿಗಳು ಮೇ 20ರಂದು ಅಧಿಕಾರ ಸ್ವೀಕರಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.