ADVERTISEMENT

ಕಾನೂನು ನಿಯಮಗಳ ಅನುಷ್ಠಾನ ಶಿಕ್ಷಣದ ಗುಣಮಟ್ಟವನ್ನು ನಿರ್ಧರಿಸುತ್ತದೆ: ಸಿಜೆಐ

ಪಿಟಿಐ
Published 1 ಸೆಪ್ಟೆಂಬರ್ 2018, 20:05 IST
Last Updated 1 ಸೆಪ್ಟೆಂಬರ್ 2018, 20:05 IST
ದೆಹಲಿಯಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ಕೈಕುಲುಕಿದ ರಾಷ್ಟ್ರಪತಿ ರಾಮನಾಥ ಕೋವಿಂದ್  –ಪಿಟಿಐ ಚಿತ್ರ
ದೆಹಲಿಯಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ಕೈಕುಲುಕಿದ ರಾಷ್ಟ್ರಪತಿ ರಾಮನಾಥ ಕೋವಿಂದ್ –ಪಿಟಿಐ ಚಿತ್ರ   

ನವದೆಹಲಿ: ಕಾನೂನಿನ ನಿಯಮಗಳ ಅನುಷ್ಠಾನವು ದೇಶದ ಕಾನೂನು ಶಿಕ್ಷಣದ ಗುಣಮಟ್ಟವನ್ನು ಆಧರಿಸಿರುತ್ತದೆ ಎಂದು ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ ಹೇಳಿದ್ದಾರೆ.

ಕಾನೂನು ಶಿಕ್ಷಕರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು. ‘ಕಾನೂನು ಶಿಕ್ಷಣ ವಿಜ್ಞಾನವಿದ್ದಂತೆ. ಇದು ವಿದ್ಯಾರ್ಥಿಗಳಲ್ಲಿ ಪರಿಪಕ್ವತೆ ಹಾಗೂ ಸಮಾಜವನ್ನು ಅರ್ಥೈಸಿಕೊಳ್ಳುವುದನ್ನು ಕಲಿಸುತ್ತದೆ. ನಾಗರಿಕರ ಸ್ವಾತಂತ್ರ್ಯವನ್ನು ರಕ್ಷಿಸಲು ಸಿದ್ಧರಾಗುವಂತೆ ಅವರನ್ನು ತಯಾರುಗೊಳಿಸುತ್ತದೆ’ ಎಂದು ಹೇಳಿದ್ದಾರೆ.

ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳ ಕಾರ್ಯವೈಖರಿಯನ್ನು ಪ್ರಶಂಸಿಸಿದ ಸಿಜೆಐ, ದೇಶದಲ್ಲಿ ಗುಣಮಟ್ಟದ ಶಿಕ್ಷಣವನ್ನು ಪೂರೈಸುವಲ್ಲಿ ಅವು ಯಶಸ್ವಿಯಾಗಿವೆ ಎಂದರು.

ADVERTISEMENT

‘ಕಾನೂನಿನ ಜೊತೆ ಸಂಬಂಧ ಹೊಂದಿರುವ ಸಾಮಾಜಿಕ, ನೈತಿಕ ಹಾಗೂ ರಾಜಕೀಯ ದೃಷ್ಟಿಕೋನ ಹಾಗೂ ಅವುಗಳ ನಿರ್ಣಾಯ ಚಿಂತನೆಗಳನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಲು ಕಾನೂನು ಶಾಲೆಗಳು ಗಮನ ಹರಿಸಬೇಕು’ ಎಂದು ಅವರು ಸಲಹೆ ನೀಡಿದರು.

ದೇಶದಲ್ಲಿ 23 ಕಾನೂನು ವಿಶ್ವವಿದ್ಯಾಲಯಗಳಿದ್ದರೂ, ಅವುಗಳ ಸಂಖ್ಯೆ ಕಡಿಮೆ ಎಂದು ಪ್ರಾಧ್ಯಾಪಕ ಎನ್‌.ಆರ್. ಮಾಧವ ಮನನ್ ಅವರು ಹೇಳಿದರು. ಕಾನೂನು ಶಾಲೆಗಳು ದೇಶದಲ್ಲಿ ನಿರ್ಲಕ್ಷ್ಯಕ್ಕೊಳಗಾಗಿವೆ ಎಂದೂ ಅವರು ದೂರಿದರು.

ಬೆಂಗಳೂರು ಪ್ರಾಧ್ಯಾಪಕರಿಗೆ ಪ್ರಶಸ್ತಿ:ಈ ಬಾರಿಯ ಪ್ರತಿಷ್ಠಿತ ‘ಎಸ್‌ಐಎಲ್‌ಎಫ್–ಎಂಐಎಲ್‌ಎಟಿ ಪ್ರೊ. ಎನ್.ಆರ್.ಮಾಧವ ಮೆನನ್ ಅತ್ಯುತ್ತಮ ಕಾನೂನು ಶಿಕ್ಷಕ ಪ್ರಶಸ್ತಿ‌’ಯು ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆಯ ಪ್ರಾಧ್ಯಾಪಕ ಪ್ರೊ. ಆರ್.ವೆಂಕಟರಾವ್ ಅವರಿಗೆ ಸಂದಿದೆ.
**
‘ಪ್ರಕರಣ ಮುಂದೂಡಿಕೆ ಸಂಸ್ಕೃತಿ’
‘ಮುಂದೂಡಿಕೆ ಸಂಸ್ಕೃತಿ’ಯಿಂದಕೋರ್ಟ್‌ನಲ್ಲಿ ಪ್ರಕರಣಗಳು ದೀರ್ಘಕಾಲ ಇತ್ಯರ್ಥವಾಗದೆ ಉಳಿಯುತ್ತಿವೆ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಹೇಳಿದ್ದಾರೆ. ಸಾಮಾನ್ಯ ಎಂಬಂತಾಗಿರುವ ಈ ಮನೋಭಾವವನ್ನು ತಗ್ಗಿಸಲು ನ್ಯಾಯಾಂಗ ವ್ಯವಸ್ಥೆ ಯತ್ನಿಸುತ್ತಿದೆ’ ಎಂದಿದ್ದಾರೆ.

‘ಭಾರತೀಯ ನ್ಯಾಯ ವ್ಯವಸ್ಥೆ ಬಗ್ಗೆ ಜಗತ್ತಿನಾದ್ಯಂತ ಗೌರವವಿದೆ. ಆದರೆ ಅತಿಯಾದ ಪ್ರಕರಣಗಳಿಂದ ನ್ಯಾಯಾಧೀಶರ ಮೇಲೆ ಒತ್ತಡವಿದೆ ಎಂಬುದೂ ಸತ್ಯ. ಮೂಲಭೂತಸೌಕರ್ಯ ಹಾಗೂ ಸಿಬ್ಬಂದಿ ಕೊರತೆ ಕಾರಣದಿಂದ ಹೀಗಾಗುತ್ತಿದೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.