ಮದುರೈ: ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಎನ್ಡಿಎ ಸರ್ಕಾರ ರಚನೆ ಮಾಡಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭಾನುವಾರ ಇಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.
‘2026ರಲ್ಲಿ ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಉತ್ತಮ ಆಡಳಿತ ಕೊಡುವಲ್ಲಿ ವಿಫಲವಾಗಿರುವ ತಮಿಳುನಾಡಿನ ಡಿಎಂಕೆ ಸರ್ಕಾರವನ್ನು ಇಲ್ಲಿನ ಜನರು ಸೋಲಿಸಲಿದ್ದಾರೆ. ಬಿಜೆಪಿ–ಎಐಎಡಿಎಂಕೆ ಸರ್ಕಾರ ರಚನೆ ಆಗಲಿದೆ’ ಎಂದರು.
ತಮಿಳುನಾಡು ಬಿಜೆಪಿ ಕೋರ್ ಕಮಿಟಿ ಸಭೆ ನಂತರ ರಾಜ್ಯ, ಜಿಲ್ಲಾ ಮತ್ತು ಮಂಡಲ ಮಟ್ಟದ ಪದಾಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಮಧುರೈ ಪರಿವರ್ತನೆಯ ನಗರ. ಈ ಸಭೆಯೇ ತಮಿಳುನಾಡಿನಲ್ಲಿ ಬದಲಾವಣೆಗೆ ಮುನ್ನುಡಿ’ ಎಂದು ಹೇಳಿದರು.
ಡಿಎಂಕೆ ಭ್ರಷ್ಟಾಚಾರಿ:
ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಡಿಎಂಕೆ ಆಡಳಿತದ ವಿರುದ್ಧ ವಾಗ್ದಾಳಿ ನಡೆಸಿದ ಅಮಿತ್ ಶಾ, ‘ಡಿಎಂಕೆ ಸರ್ಕಾರದ ಭಾರಿ ಭ್ರಷ್ಟಾಚಾರದಿಂದ ತಮಿಳುನಾಡಿನ ಜನತೆ ಬೇಸತ್ತು ಹೋಗಿದ್ದಾರೆ’ ಎಂದರು.
‘ಬಿಜೆಪಿ ಕಾರ್ಯಕರ್ತರು ಡಿಎಂಕೆ ವೈಫಲ್ಯ ಮತ್ತು ತಮಿಳುನಾಡಿಗೆ ಪ್ರಧಾನಿ ಮೋದಿ ಅವರ ಕೊಡುಗೆಗಳ ಬಗ್ಗೆ ಪ್ರತಿ ಮನೆಗೂ ತಿಳಿಸಲಿದ್ದಾರೆ’ ಎಂದು ‘ಎಕ್ಸ್’ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಇನ್ನು ಇದೇ ವೇಳೆ ಅಮಿತ್ ಶಾ ಪ್ರಸಿದ್ಧ ಮೀನಾಕ್ಷಿ ದೇಗುಲಕ್ಕೆ ಪೂಜೆ ಸಲ್ಲಿಸಿದರು. ಬಿಜೆಪಿ ತಮಿಳುನಾಡು ರಾಜ್ಯ ಘಟಕದ ಅಧ್ಯಕ್ಷ ನಾಯನರ್ ನಾಗೇಂದ್ರನ್, ಕೇಂದ್ರ ಸಚಿವ ಎಲ್.ಮುರುಗನ್ ಜೊತೆಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.