ನವದೆಹಲಿ: ‘ಟೆಕ್ಸ್ಟ್ ಮೆಸೇಜ್, ಟ್ವಿಟರ್, ‘ಗೂಗಲ್ ಗುರು‘ವಿರುವ ಈ ಯುಗದಲ್ಲೂ ಹೊಸ ಪೀಳಿಗೆಯವರುಗಂಭೀರವಾದ ಜ್ಞಾನ ಸಂಪಾದನೆಗಾಗಿ ಪುಸ್ತಕಗಳನ್ನು ಓದುವ ಅಭ್ಯಾಸ ಮಾಡಿಕೊಳ್ಳುವುದು ಅನಿವಾರ್ಯ ಎಂದು ಪ್ರಧಾನಿ ನರೇಂದ್ರ ಮೋದಿಯವರು ಅಭಿಪ್ರಾಯಪಟ್ಟರು.
ಜೈಪುರದಲ್ಲಿ ಆಯೋಜಿಸಿದ್ದ ‘ಪತ್ರಿಕಾ ಗೇಟ್‘ ಕಾರ್ಯಕ್ರಮವನ್ನು ವಿಡಿಯೊ ಕಾನ್ಫೆರೆನ್ಸ್ ಮೂಲಕ ಉದ್ಘಾಟಿಸಿ, ರಾಜಸ್ಥಾನ್ ಪತ್ರಿಕಾ ಸಮೂಹದ ಅಧ್ಯಕ್ಷ ಕೊಠಾರಿ ಅವರ ಎರಡು ಕೃತಿಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ‘ಪ್ರಸ್ತುತ ಭಾರತದ ಉತ್ಪನ್ನಗಳ ಜೊತೆಗೆ ಭಾರತದ ಧ್ವನಿಯೂ ಈಗ ಜಾಗತಿಕವಾಗುತ್ತಿದೆ‘ ಎಂದು ಹೇಳಿದರು.
‘ವಿಶ್ವವೀಗ ಹಿಂದೆಂದಿಗಿಂತಲೂ ಹೆಚ್ಚು ಭಾರತದ ವಿದ್ಯಮಾನಗಳತ್ತ ಗಮನ ಹರಿಸುತ್ತಿದೆ. ಇಂಥ ಸಂದರ್ಭದಲ್ಲಿ ಭಾರತದ ಮಾಧ್ಯಮವೂ ಜಾಗತಿಕ ಮಟ್ಟಕ್ಕೆ ಬೆಳೆಯಬೇಕು‘ ಎಂದು ಆಶಿಸಿದರು.
ಕೊರೊನಾ ಸಾಂಕ್ರಾಮಿಕ ರೋಗದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಅಭೂತಪೂರ್ವವಾಗಿ ಶ್ರಮಿಸುತ್ತಿರುವ ಮಾಧ್ಯಮಗಳು, ಸರ್ಕಾರ ಕೈಗೊಂಡಿರುವ ಕ್ರಮಗಳಲ್ಲಿನ ನ್ಯೂನತೆಗಳನ್ನು ಎತ್ತಿ ತೋರಿಸಿವೆ‘ ಎಂದು ಮಾಧ್ಯಮಗಳ ಕಾರ್ಯವನ್ನು ಶ್ಲಾಘಿಸಿದರು.
‘ಕೆಲವು ವೇಳೆ ಮಾಧ್ಯಮಗಳೂ ಟೀಕೆಗಳಿಗೆ ಒಳಗಾಗುತ್ತವೆ. ಸಾಮಾಜಿಕ ಮಾಧ್ಯಮಗಳ ಈ ಕಾಲದಲ್ಲಿ ಪ್ರತಿಯೊಬ್ಬರು ಇಂಥ ಟೀಕೆ, ವಿಮರ್ಶೆಗಳಿಂದ ಸಾಕಷ್ಟು ಕಲಿಯಬೇಕಿದೆ. ಇದರಿಂದ ಭಾರತದ ಪ್ರಜಾಪ್ರಭುತ್ವ ಮತ್ತಷ್ಟು ಬಲಗೊಳ್ಳುತ್ತದೆ‘ ಎಂದು ಅವರು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.