ADVERTISEMENT

ಬಿಜೆಪಿಗೆ ಸೋಲಿನ ಭೀತಿ: ಎಸ್‌ಪಿ ನಾಯಕರ ಮನೆ ಮೇಲಿನ ಐಟಿ ದಾಳಿಗೆ ಅಖಿಲೇಶ್ ಟೀಕೆ

ಡೆಕ್ಕನ್ ಹೆರಾಲ್ಡ್
Published 18 ಡಿಸೆಂಬರ್ 2021, 9:49 IST
Last Updated 18 ಡಿಸೆಂಬರ್ 2021, 9:49 IST
ಅಖಿಲೇಶ್ ಯಾದವ್  – ಐಎಎನ್‌ಎಸ್ ಸಂಗ್ರಹ ಚಿತ್ರ
ಅಖಿಲೇಶ್ ಯಾದವ್ – ಐಎಎನ್‌ಎಸ್ ಸಂಗ್ರಹ ಚಿತ್ರ   

ಲಖನೌ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಸೋಲುವ ಭೀತಿ ಎದುರಾಗಿದೆ. ಈ ಕಾರಣಕ್ಕೆ ಸಮಾಜವಾದಿ ಪಕ್ಷದ (ಎಸ್‌ಪಿ) ನಾಯಕರ ಮನೆ ಮೇಲೆ ಆದಾಯ ತೆರಿಗೆ ಇಲಾಖೆಯಿಂದ (ಐಟಿ) ದಾಳಿ ನಡೆಯುತ್ತಿದೆ ಎಂದು ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಹೇಳಿದ್ದಾರೆ.

ರಾಯ್‌ಬರೇಲಿಯಲ್ಲಿ ಮಾತನಾಡಿದ ಅವರು, ‘ಬಿಜೆಪಿಗೆ ಚುನಾವಣೆ ಸೋಲಿನ ಭಯ ಎದುರಾಗಿದೆ. ಈಗ ಐಟಿ ದಾಳಿ ಮಾಡಿಸುತ್ತಿದ್ದಾರೆ. ಬಳಿಕ ಜಾರಿ ನಿರ್ದೇಶನಾಲಯ (ಇ.ಡಿ), ಸಿಬಿಐ ದಾಳಿ ನಡೆಸಬಹುದು. ಇದಕ್ಕೂ ಮುನ್ನ ಯಾಕೆ ಈ ದಾಳಿಗಳು ನಡೆದಿಲ್ಲ? ಚುನಾವಣೆ ಸಮೀಪಿಸಿದಾಗಲೇ ಯಾಕೆ? ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಸೆಣಸಲು ಐಟಿ ಇಲಾಖೆಯೂ ಮುಂದಾಗಿದೆ. ಚುನಾವಣೆಯಲ್ಲಿ ಬಿಜೆಪಿಗೆ ಹೀನಾಯ ಸೋಲಾಗಲಿದೆ’ ಎಂದು ಹೇಳಿದ್ದಾರೆ.

ಉತ್ತರ ಪ್ರದೇಶದ ಹಲವೆಡೆ ಅಖಿಲೇಶ್‌ ಅವರ ಕೆಲವು ಆಪ್ತ ನಾಯಕರ ಮನೆಗಳ ಮೇಲೆ ಶನಿವಾರ ಐಟಿ ದಾಳಿ ನಡೆದಿದೆ.

ಸಮಾಜವಾದಿ ಪಕ್ಷದ ವಕ್ತಾರ ರಾಜೀವ್ ರೈ, ಅಖಿಲೇಶ್ ಅವರ ವೈಯಕ್ತಿಕ ಕಾರ್ಯದರ್ಶಿ ಜೈನೇಂದ್ರ ಯಾದವ್ ಹಾಗೂ ಮತ್ತೊಬ್ಬ ನಾಯಕ ಮನೋಜ್ ಯಾದವ್ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.