ನವದೆಹಲಿ: 1965ರಲ್ಲಿ ಸ್ಥಗಿತಗೊಂಡಿದ್ದ ಚಿಲಿಹತಿ–ಹಲ್ದಿಬಾರಿ ರೈಲು ಸಂಪರ್ಕ ಪುನಶ್ಚೇತನ ಸೇರಿದಂತೆ ಏಳು ಒಪ್ಪಂದಗಳಿಗೆ ಭಾರತ ಮತ್ತು ಬಾಂಗ್ಲಾದೇಶ ರಾಷ್ಟ್ರಗಳು ಸಹಿ ಹಾಕಿವೆ.
ರೈಲು ಸಂಪರ್ಕ ಪುನಶ್ಚೇತನ ಹಾಗೂ ಒಪ್ಪಂದಕ್ಕೆ ಸಹಿಹಾಕುವ ಜತೆಗೆ, ಹೈಡ್ರೋಕಾರ್ಬನ್, ಕೃಷಿ ಮತ್ತು ಜವಳಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಹಕಾರ ವಿಸ್ತರಿಸುವ ಕುರಿತು ಉಭಯ ದೇಶಗಳ ನಾಯಕರು ಆಸಕ್ತಿ ವ್ಯಕ್ತಪಡಿಸಿದ್ದಾರೆ.
ಬಾಂಗ್ಲಾದೇಶದಲ್ಲಿ ಗುರುವಾರ ಆರಂಭವಾದ ಶೃಂಗಸಭೆಯನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು, 'ನೆರೆಹೊರೆಯ ಮಿತ್ರರಾಷ್ಟ್ರಗಳಲ್ಲಿ ಭಾರತ, ಬಾಂಗ್ಲಾದೇಶಕ್ಕೆ ಪ್ರಮುಖ ಸ್ಥಾನ ನೀಡಿದೆ' ಎಂದರು.
'ಬಾಂಗ್ಲಾದೇಶ ಮತ್ತು ಭಾರತದ ನಡುವಿನ ಸಂಬಂಧವನ್ನು ಬಲಪಡಿಸುವುದು ನಮ್ಮ ಆದ್ಯತೆಯಾಗಿದೆ' ಎಂದು ಅವರು 'ಬಾಂಗ್ಲಾ ವಿಮೋಚನಾ ದಿನದ ಅಂಗವಾಗಿ, ನಿಮ್ಮೊಂದಿಗೆ ನಾವು ಭಾರತದಲ್ಲಿ 'ವಿಜಯ್ ದಿವಸ್' ಆಚರಿಸುತ್ತಿದ್ದೇವೆ' ಎಂದು ಹೇಳಿದರು. ಇದೇ ವೇಳೆ ಬಾಂಗ್ಲಾ ಪ್ರಧಾನಿ ಹಸೀನಾ, 'ಭಾರತ ನಮ್ಮ ನಿಜವಾದ ಸ್ನೇಹಿತ' ಎಂದು ಬಣ್ಣಿಸಿದರು.
ನಂತರ ಮೋದಿ ಮತ್ತು ಹಸೀನಾ ಅವರು ಬಾಂಗ್ಲಾ ದೇಶದ ಸಂಸ್ಥಾಪಕ ಮುಜಿಬುರ್ ರಹಮಾನ್ ಮತ್ತು ಭಾರತದ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಜೀವನ ಮತ್ತು ಪರಂಪರೆ ಸಾರುವ ಡಿಜಿಟಲ್ ಪ್ರದರ್ಶನವನ್ನು ಉದ್ಘಾಟಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.