ADVERTISEMENT

ಗಡಿ ಕಿರಿಕಿರಿ | ಪೂರ್ವ ಲಡಾಖ್‌ ಸಂಘರ್ಷಕ್ಕೆ ಚೀನಾ ದೇಶವೇ ಕಾರಣ: ಭಾರತ ಸ್ಪಷ್ಟನೆ

ಪಿಟಿಐ
Published 26 ಜೂನ್ 2020, 1:07 IST
Last Updated 26 ಜೂನ್ 2020, 1:07 IST
ಚೀನಾ ಸೇನೆ- ಸಾಂಕೇತಿಕ ಚಿತ್ರ
ಚೀನಾ ಸೇನೆ- ಸಾಂಕೇತಿಕ ಚಿತ್ರ   

ನವದೆಹಲಿ: ಗಾಲ್ವನ್‌ ಕಣಿವೆಯಲ್ಲಿ ಭಾರತದ ಸಹಜ, ಮತ್ತು ಸಾಂಪ್ರದಾಯಿಕ ಗಸ್ತು ಪ್ರಕ್ರಿಯೆಗೆ ಚೀನಾವು ಮೇ ಆರಂಭದಲ್ಲಿ ತಡೆ ಒಡ್ಡುವಂತಹ ಕ್ರಮಗಳನ್ನು ಕೈಗೊಂಡಿತ್ತು. ಪಶ್ಚಿಮ ವಲಯದ ಗಡಿಯಲ್ಲಿಯೂ ಯಥಾಸ್ಥಿತಿಯನ್ನು ಬದಲಾಯಿಸಲು ಮೇ ಮಧ್ಯಭಾಗದಲ್ಲಿ ಪ್ರಯತ್ನಿಸಿತ್ತು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅನುರಾಗ್‌ ಶ್ರೀವಾಸ್ತವ ಹೇಳಿದ್ದಾರೆ.

ವಾಸ್ತವ ನಿಯಂತ್ರಣ ರೇಖೆಯ (ಎಲ್‌ಎಸಿ) ಉದ್ದಕ್ಕೂ ಭಾರಿ ಸಂಖ್ಯೆಯಲ್ಲಿ ಸೈನಿಕರು ಮತ್ತು ಯುದ್ಧೋಪಕರಣಗಳನ್ನು ಚೀನಾವು ಮೇ ಆರಂಭದಿಂದಲೇ ಜಮಾಯಿಸುತ್ತಾ ಬಂದಿದೆ.\ ದ್ವಿಪಕ್ಷೀಯ ಒಪ್ಪಂದಗಳೆಲ್ಲವನ್ನೂ ಗಾಳಿಗೆ ತೂರಿದೆ. ಪೂರ್ವ ಲಡಾಖ್‌ನ ಸಂಘರ್ಷಕ್ಕೆ ಆ ದೇಶವೇ ಕಾರಣ ಎಂದು ಭಾರತ ಸ್ಪಷ್ಟವಾಗಿ ಹೇಳಿದೆ.

‘ಚೀನಾದ ಕ್ರಮಗಳನ್ನು ರಾಜತಾಂತ್ರಿಕ ಮತ್ತು ಸೇನಾ ಮಟ್ಟದಲ್ಲಿ ನಾವು ಪ್ರತಿಭಟಿಸಿದ್ದೇವೆ. ಚೀನಾದ ಆಕ್ರಮಣಕಾರಿ ನಡೆಯು ನಮಗೆ ಸ್ವೀಕಾರಾರ್ಹವಲ್ಲ ಎಂದೂ ಹೇಳಿದ್ದೇವೆ. ಅದಾದ ಬಳಿಕ, ಜೂನ್‌ 6ರಂದು ಹಿರಿಯ ಕಮಾಂಡರ್‌ಗಳ ಮಟ್ಟದಲ್ಲಿ ಸಭೆ ನಡೆಯಿತು. ಸಂಘರ್ಷದ ಸ್ಥಳದಿಂದ ಸೈನಿಕರನ್ನು ಹಿಂದಕ್ಕೆ ಕರೆಸಿಕೊಳ್ಳಲುಈ ಸಭೆಯಲ್ಲಿ ನಿರ್ಧರಿಸಲಾಗಿತ್ತು’ ಎಂದು ಶ್ರೀವಾಸ್ತವ ವಿವರಿಸಿದ್ದಾರೆ.

ADVERTISEMENT

ಸಭೆಯ ಈ ನಿರ್ಧಾರವನ್ನು ಚೀನೀಯರು ಪಾಲಿಸಲಿಲ್ಲ. ಎಲ್‌ಎಸಿಯ ಎದುರಿನಲ್ಲಿಯೇ ಗೋಪುರ ನಿರ್ಮಿಸಿದರು. ಅದನ್ನು ತಡೆಯಲು ಭಾರತದ ಯೋಧರು ಜೂನ್‌ 15ರಂದು ಯತ್ನಿಸಿದಾಗ ಹೊಡೆದಾಟ ನಡೆಯಿತು. ಬಳಿಕ, ಭಾರಿ ಸಂಖ್ಯೆಯ ಯೋಧರು ಎರಡೂ ಕಡೆ ಬೀಡುಬಿಟ್ಟಿದ್ದಾರೆ ಎಂದು ಹೇಳಿದ್ದಾರೆ.

ಚೀನಾ ಸರಕಿನ ಮೇಲೆನಿಗಾ

ಚೀನಾದಿಂದ ತರಿಸಲಾಗುತ್ತಿರುವ ಎಲ್ಲ ಸರಕುಗಳನ್ನು ಕಸ್ಟಮ್ಸ್‌ ಅಧಿಕಾರಿಗಳು ನೇರವಾಗಿ ಪರಿಶೀಲನೆ ನಡೆಸುತ್ತಿದ್ದಾರೆ. ಗುಪ್ತಚರ ಮಾಹಿತಿಯ ಆಧಾರದಲ್ಲಿ ಇದು ನಡೆಯುತ್ತಿದೆ.‌

ಈ ಬಗ್ಗೆ ಅಧಿಕೃತ ಆದೇಶ ಹೊರಡಿಸಲಾಗಿಲ್ಲ. ಆದರೆ, ಎಲ್ಲ ವಿಮಾನ ನಿಲ್ದಾಣಗಳು, ಬಂದರುಗಳಲ್ಲಿ ಸರಕು, ಅವುಗಳ ದಾಖಲೆ ಮತ್ತು ಮೌಲ್ಯವನ್ನು ಪರಿಶೀಲನೆಗೆ ಒಳಪಡಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.