ADVERTISEMENT

ಆರ್‌ಸಿಇಪಿ ಒಪ್ಪಂದ ತಿರಸ್ಕರಿಸಿದ ಭಾರತ

ರಾಯಿಟರ್ಸ್
Published 4 ನವೆಂಬರ್ 2019, 14:50 IST
Last Updated 4 ನವೆಂಬರ್ 2019, 14:50 IST
ಆರ್‌ಸಿಇಪಿ ಶೃಂಗಸಭೆಯಲ್ಲಿ ನರೇಂದ್ರ ಮೋದಿ- ಚೀನಾ ಪ್ರಧಾನಿ ಲಿ ಕೆಕಿಯಾಂಗ್
ಆರ್‌ಸಿಇಪಿ ಶೃಂಗಸಭೆಯಲ್ಲಿ ನರೇಂದ್ರ ಮೋದಿ- ಚೀನಾ ಪ್ರಧಾನಿ ಲಿ ಕೆಕಿಯಾಂಗ್   

ಬ್ಯಾಂಕಾಕ್‌ : ಭಾರತದ ತಯಾರಿಕಾ ವಲಯ ಮತ್ತು ಹೈನುಗಾರಿಕೆಗೆ ಧಕ್ಕೆ ತರಲಿದೆ ಎಂಬ ಆತಂಕಕ್ಕೆ ಕಾರಣವಾಗಿದ್ದ ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿಕೆ (ಆರ್‌ಸಿಇಪಿ) ಒಪ್ಪಂದವನ್ನು ಭಾರತ ತಿರಸ್ಕರಿಸಿದೆ.

ಭಾರತವನ್ನು ಹೊರತುಪಡಿಸಿ ಉಳಿದ 15 ರಾಷ್ಟ್ರಗಳು ಈ ಒಪ್ಪಂದಕ್ಕೆ ಸಹಿ ಹಾಕಲು ಒಪ್ಪಿಕೊಂಡಿವೆ. ವಿಯೆಟ್ನಾಂನಲ್ಲಿ 2020ರ ಫೆಬ್ರುವರಿಯಲ್ಲಿ ನಡೆಯಲಿರುವ ಆರ್‌ಸಿಇಪಿ ಶೃಂಗಸಭೆಯಲ್ಲಿ ಈ ರಾಷ್ಟ್ರಗಳು ಒಪ್ಪಂದಕ್ಕೆ ಸಹಿ ಹಾಕಲಿವೆ.

ಸದಸ್ಯ ರಾಷ್ಟ್ರಗಳ ನಡುವೆ ಸುಂಕ ರಹಿತ ವ್ಯಾಪಾರಕ್ಕೆ ಅವಕಾಶ ಕೊಡುವುದರಿಂದ, ಈ ಒಪ್ಪಂದವು ನಮ್ಮ ಆರ್ಥಿಕತೆಯನ್ನು ಅಸ್ಥಿರಗೊಳಿಸುತ್ತದೆ. ಹೀಗಾಗಿ ಕೆಲವು ಸರಕುಗಳ ಮೇಲೆ ಸುಂಕ ಜಾರಿಯಲ್ಲಿರಲು ಅವಕಾಶ ನೀಡಬೇಕು ಎಂದು ಭಾರತವು ಪಟ್ಟು ಹಿಡಿದಿತ್ತು. ಇದಕ್ಕೆ ಉಳಿದ ರಾಷ್ಟ್ರಗಳು ಸಹಮತ ಸೂಚಿಸಲಿಲ್ಲ. ಹೀಗಾಗಿ ಒಪ್ಪಂದವನ್ನು ತಿರಸ್ಕರಿಸಲಾಯಿತು ಎಂದು ಭಾರತದ ವಿದೇಶಾಂಗ ಸಚಿವಾಲಯವು ಹೇಳಿದೆ.

ADVERTISEMENT

2012ರಲ್ಲಿ ಕೇಂದ್ರದಲ್ಲಿ ಯುಪಿಎ ಸರ್ಕಾರವಿದ್ದಾಗ ಈ ಒಪ್ಪಂದದ ಮಾತುಕತೆ ಆರಂಭವಾಗಿತ್ತು. ಕೆಲವು ಸರಕುಗಳನ್ನು ಸುಂಕರಹಿತ ವ್ಯಾಪಾರದಿಂದ ಹೊರಗೆ ಇಡಬೇಕು ಎಂದು ಅಂದಿನ ಸರ್ಕಾರ ಪ್ರತಿಪಾದಿಸಿತ್ತು. ನಂತರದ ಸರ್ಕಾರಗಳೂ ಇದನ್ನೇ ಪ್ರತಿಪಾದಿಸಿದವು. ಹೀಗಾಗಿ ಒಪ್ಪಂದ ಅಂತಿಮವಾಗಿರಲಿಲ್ಲ. ಆದರೆ, ಈಗ ಒಪ್ಪಂದ ಅಂತಿಮವಾಗಲೇಬೇಕು ಎಂದು ಚೀನಾ ಆಗ್ರಹಿಸಿತು. ಹೀಗಾಗಿ ಭಾರತವನ್ನು ಒಕ್ಕೂಟಕ್ಕೆ ಸೇರಿಸಿಕೊಳ್ಳುವ ಆಯ್ಕೆಯನ್ನು ಮುಕ್ತವಾಗಿರಿಸಿಕೊಂಡು, ಉಳಿದ ರಾಷ್ಟ್ರಗಳು ಒಪ್ಪಂದದ ಕರಡನ್ನು ಅಂತಿಮಗೊಳಿಸಿವೆ.

ಒಪ್ಪಂದವು ಜಾರಿಯಾದರೆ ಆಸಿಯಾನ್ ರಾಷ್ಟ್ರಗಳು ಮತ್ತು ಚೀನಾದಿಂದ ಅತ್ಯಂತ ಕಡಿಮೆ ಬೆಲೆಯಲ್ಲಿ ಸರಕುಗಳು ಭಾರತಕ್ಕೆ ಆಮದಾಗುತ್ತವೆ. ಇದರಿಂದ ಭಾರತೀಯ ವಸ್ತುಗಳಿಗೆ ಬೇಡಿಕೆ ಕುಸಿದು, ಭಾರತದ ತಯಾರಿಕಾ ವಲಯಕ್ಕೆ ಧಕ್ಕೆಯಾಗುತ್ತದೆ. ಹಾಲಿನ ಉತ್ಪನ್ನಗಳೂ ಕಡಿಮೆ ಬೆಲೆಯಲ್ಲಿ ಆಮದಾಗುವುದರಿಂದ ಭಾರತದ ಹೈನುಗಾರಿಕೆಗೆ ಧಕ್ಕೆಯಾಗಲಿದೆ ಎಂದು ಕಾರ್ಮಿಕ ಮತ್ತು ರೈತ ಸಂಘಟನೆಗಳು ಆತಂಕ ವ್ಯಕ್ತಪಡಿಸಿದ್ದವು. ಈ ಒಪ್ಪಂದದ ವಿರುದ್ಧ ದೇಶದ ಹಲವೆಡೆ ಪ್ರತಿಭಟನೆಗಳು ನಡೆದಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.