
ಕೊಯಮತ್ತೂರು: ಸಾಂಪ್ರದಾಯಿಕ ಮತ್ತು ದೇಶೀಯ ಶೈಲಿಯ ಕೃಷಿಯ ಮೂಲಕ ಭಾರತವು ಸಾವಯವ ಕೃಷಿಯ ಜಾಗತಿಕ ಕೇಂದ್ರವಾಗುವ ಹಾದಿಯಲ್ಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ತಿಳಿಸಿದ್ದಾರೆ.
ದಕ್ಷಿಣ ಭಾರತ ನೈಸರ್ಗಿಕ ಕೃಷಿ ಸಮ್ಮೇಳನ – 2025ವನ್ನು ಉದ್ಘಾಟಿಸಿ ಮಾತನಾಡಿದರು. ಇದೇ ವೇಳೆ ₹ 18 ಸಾವಿರ ಕೋಟಿ ಮೊತ್ತದ ಪಿಎಂ–ಕಿಸಾನ್ ಯೋಜನೆಯ 21ನೇ ಕಂತನ್ನು ಬಿಡುಗಡೆಗೊಳಿಸಿದರು. ದೇಶದಾದ್ಯಂತ 9 ಕೋಟಿ ರೈತರ ಖಾತೆಗಳಿಗೆ ಇದು ಜಮೆಯಾಗಲಿದೆ.
ರಾಸಾಯನಿಕ ಗೊಬ್ಬರಗಳನ್ನು ಬಳಸುವುದರಿಂದ ಮಣ್ಣಿನ ಫಲವತ್ತತೆ ಕಡಿಮೆಯಾಗುತ್ತದೆ. ರೈತರು ಸಾವಯವ ಕೃಷಿಯ ಕಡೆ ಆಸಕ್ತಿ ತೋರಿಸಬೇಕು. ಇದರಿಂದ ಮಣ್ಣಿನ ಸವಕಳಿಯನ್ನು ಕೂಡ ತಡೆಗಟ್ಟಬಹುದು ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಕಾರ್ಯಕ್ರಮಕ್ಕೆ ಆಗಮಿಸುವ ಸಮಯದಲ್ಲಿ ಜನರು ತಮ್ಮ ಟವೆಲ್ಗಳನ್ನು ಗಾಳಿಯಲ್ಲಿ ತೂರಿದರು. ಇದನ್ನು ಗಮನಿಸಿದ ಮೋದಿ ‘ನಾನು ತಮಿಳುನಾಡಿಗೆ ಆಗಮಿಸುವ ಮುನ್ನವೇ ಬಿಹಾರದ ಅಲೆ ಇಲ್ಲಿ ಪ್ರವೇಶಿಸಿದೆ’ ಎಂದರು. ಇತ್ತೀಚೆಗೆ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್ಡಿಎ ಮೈತ್ರಿಕೂಟ ಭರ್ಜರಿ ಜಯಗಳಿಸಿತ್ತು.
ಮುಂದಿನ ವರ್ಷ ತಮಿಳುನಾಡಿನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಎಐಎಡಿಎಂಕೆ ನೇತೃತ್ವದಲ್ಲಿ ಎನ್ಡಿಎ ಸರ್ಕಾರವು ಅಧಿಕಾರಕ್ಕೆ ಬರಲಿದೆ. ಎಂ.ಕೆ. ಸ್ಟಾಲಿನ್ ನಾಯಕತ್ವದ ಡಿಎಂಕೆ ಅಧಿಕಾರ ಕೊನೆಗೊಳ್ಳಲಿದೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.