ADVERTISEMENT

ಪಾಕ್ ಪ್ರಧಾನಿ ಇಮ್ರಾನ್ ಖಾನ್‌ರ ನಗದು ವರ್ಗಾವಣೆ ಯೋಜನೆ ಸಲಹೆ ತಿರಸ್ಕರಿಸಿದ ಭಾರತ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಜೂನ್ 2020, 2:17 IST
Last Updated 12 ಜೂನ್ 2020, 2:17 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕೊರನಾ ಬಿಕ್ಕಟ್ಟಿನಿಂದಾಗಿ ಕೆಲಸ ಕಳೆದುಕೊಂಡವರಿಗೆ ನೆರವಾಗಲು ತಮ್ಮ ಸರ್ಕಾರದ ‘ನಗದು ವರ್ಗಾವಣೆ ಯೋಜನೆ’ಯ ಮಾಹಿತಿ ಹಂಚಿಕೊಳ್ಳುವುದಾಗಿ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಮಾಡಿರುವ ಪ್ರಸ್ತಾಪವನ್ನು ಭಾರತ ತಿರಸ್ಕರಿಸಿದೆ.

‘ಈ ಕೆಳಗೆ ಉಲ್ಲೇಖಿಸಿರುವ ವರದಿಯ ಪ್ರಕಾರ, ಭಾರತದಲ್ಲಿರುವ ಶೇ 34ರಷ್ಟು ಕುಟುಂಬಗಳು ಹೆಚ್ಚುವರಿ ನೆರವು ಇಲ್ಲದೆ ಒಂದು ವಾರಕ್ಕಿಂತ ಹೆಚ್ಚು ಜೀವನ ಮಾಡುವುದು ಕಷ್ಟಸಾಧ್ಯ. ಸಹಾಯ ಮಾಡುವುದಕ್ಕೆ ನಾನು ಸಿದ್ಧನಿದ್ದೇನೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆಗೆ ವ್ಯಕ್ತವಾದ ಹಾಗೂ ಯಶಸ್ವಿಯಾಗಿರುವ, ನಮ್ಮ ಸರ್ಕಾರದ ನಗದು ವರ್ಗಾವಣೆ ಯೋಜನೆ ಬಗ್ಗೆ ಭಾರತದ ಜತೆ ಮಾಹಿತಿ ಹಂಚಿಕೊಳ್ಳಲು ಸಿದ್ಧನಿದ್ದೇನೆ’ ಎಂದು ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್ ವರದಿಯೊಂದನ್ನು ಲಗತ್ತಿಸಿ ಇಮ್ರಾನ್ ಖಾನ್ ಟ್ವೀಟ್ ಗುರುವಾರ ಮಾಡಿದ್ದರು.

ಪಾಕ್ ಪ್ರಧಾನಿಯ ಈ ಪ್ರಸ್ತಾಪವನ್ನು ಭಾರತ ತಿರಸ್ಕರಿಸಿದೆ.

ADVERTISEMENT

‘ತಮ್ಮ ದೇಶದ ಜನರಿಗೆ ನಗದು ವರ್ಗಾವಣೆ ಮಾಡುವ ಬದಲು ಹೊರ ದೇಶದವರಿಗೆ ವರ್ಗಾಯಿಸುವುದರಲ್ಲಿ ಪಾಕಿಸ್ತಾನ ಹೆಸರುವಾಸಿಯಾಗಿದೆ’ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ಹೇಳಿದ್ದಾರೆ.

‘ಇಮ್ರಾನ್‌ ಖಾನ್‌ಗೆ ಸ್ಪಷ್ಟ ಮಾಹಿತಿ ಕೊಡಬಲ್ಲ ಹೊಸ ಸಲಹೆಗಾರರ ಅಗತ್ಯವಿದೆ. ಪಾಕಿಸ್ತಾನದ ಸಾಲವು ಜಿಡಿಪಿಯ ಶೇ 90ರಷ್ಟಿದೆ. ಸಾಲದ ಸಮಸ್ಯೆಯ ಬಗ್ಗೆ ಅವರು ಎಷ್ಟು ಒತ್ತು ನೀಡಿದ್ದಾರೆ ಎಂಬುದು ನಮಗೆಲ್ಲ ತಿಳಿದಿದೆ ಎಂದು ವಕ್ತಾರರು ಹೇಳಿದ್ದಾರೆ.

ಸರಿಸುಮಾರು ಪಾಕಿಸ್ತಾನದ ಜಿಡಿಪಿಯಷ್ಟೇ ಮೊತ್ತದ ಆರ್ಥಿಕ ಪ್ಯಾಕೇಜನ್ನು ಭಾರತ ಘೋಷಿಸಿದೆ. ಇದನ್ನು ಇಮ್ರಾನ್ ಖಾನ್ ನೆನಪಿಸಿಕೊಳ್ಳುವುದು ಉತ್ತಮ ಎಂದೂ ಶ್ರೀವಾಸ್ತವ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.