ADVERTISEMENT

26/11 ಮುಂಬೈ ದಾಳಿ ಬಳಿಕ ಭಾರತ ಪಾಕ್ ಮೇಲೆ ದಾಳಿ ನಡೆಸಬೇಕಿತ್ತು: ಮನೀಶ್ ತಿವಾರಿ

ಪಿಟಿಐ
Published 23 ನವೆಂಬರ್ 2021, 15:27 IST
Last Updated 23 ನವೆಂಬರ್ 2021, 15:27 IST
   

ನವದೆಹಲಿ: 2008ರ ಮುಂಬೈ ಭಯೋತ್ಪಾದಕ ದಾಳಿ ಸಂದರ್ಭ ಅಂದಿನ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರವು, ಪ್ರತಿಯಾಗಿ ಪಾಕಿಸ್ತಾನದ ಮೇಲೆ ದಾಳಿ ಮಾಡಬೇಕಿತ್ತು ಎಂದು ಹಿರಿಯ ಕಾಂಗ್ರೆಸ್ ನಾಯಕ ಮನೀಶ್ ತಿವಾರಿಯವರ ಇನ್ನೂ ಬಿಡುಗಡೆಯಾಗದ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.

ಹೀಗಾಗಿ, ಚುನಾವಣಾ ಕಾಲದಲ್ಲಿಕಾಂಗ್ರೆಸ್‌ಗೆ ತಮ್ಮದೇ ಪಕ್ಷದ ನಾಯಕರಿಂದ ಮುಜುಗರ ಉಂಟಾಗಿದೆ.

ತಿವಾರಿ ಬರೆದಿರುವ ‘10 ಫ್ಲಾಶ್ ಪಾಯಿಂಟ್ಸ್, 20 ಇಯರ್ಸ್: ನ್ಯಾಶನಲ್ ಸೆಕ್ಯೂರಿಟಿ ಸಿಚುಯೇಶನ್ ದಟ್ ಇಂಪ್ಯಾಕ್ಟೆಡ್ ಇಂಡಿಯಾ’ ಪುಸ್ತಕವು ಡಿಸೆಂಬರ್‌ 1ಕ್ಕೆ ಮಾರುಕಟ್ಟೆಗೆ ಬರಲಿದೆ. ಹಣಕಾಸಿನ ನಿರ್ಬಂಧಗಳನ್ನು ಉಲ್ಲೇಖಿಸಿ ಚೀನಾದ ವಿರುದ್ಧ ಮೌಂಟೇನ್ ಸ್ಟ್ರೈಕ್ ಕಾರ್ಪ್ಸ್ ಯೋಜನೆಗಳನ್ನು ಸ್ಥಗಿತಗೊಳಿಸಿದ್ದಕ್ಕಾಗಿ ನರೇಂದ್ರ ಮೋದಿ ಸರ್ಕಾರವನ್ನೂ ಪುಸ್ತಕದಲ್ಲಿ ಟೀಕಿಸಲಾಗಿದೆ.

ADVERTISEMENT

26/11 ದಾಳಿಗೆ ಸೇಡು ತೀರಿಸಿಕೊಳ್ಳದ ಕಾಂಗ್ರೆಸ್ ನೇತೃತ್ವದ ಸರ್ಕಾರದ ಲೋಪವನ್ನು ಅವರದೇ ಪಕ್ಷದ ನಾಯಕ ಉಲ್ಲೇಖಿಸಿರುವುದರ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಬಿಜೆಪಿ, ಮುಂಬೈ ದಾಳಿ ಬಳಿಕ ಪಾಕಿಸ್ತಾನಕ್ಕೆ ತಕ್ಕ ಉತ್ತರ ಕೊಡದ ಯುಪಿಎ ರಾಷ್ಟ್ರೀಯ ಭದ್ರತೆಯನ್ನು ಪಣಕ್ಕಿಟ್ಟಿತ್ತು ಎಂದು ಆರೋಪಿಸಿದೆ.

ಇದು ಯುಪಿಎ ಸರ್ಕಾರವು ‘ಅಪ್ರಯೋಜಕ’ವಾಗಿತ್ತು ಎಂಬುದನ್ನು ಖಚಿತಪಡಿಸುತ್ತದೆ ಎಂದು ಬಿಜೆಪಿ ವಕ್ತಾರ ಗೌರವ ಭಾಟಿಯಾ ಟೀಕಿಸಿದ್ದಾರೆ.‘ಇದರಿಂದ ಯುಪಿಎ ಸರ್ಕಾರವು ಸಂವೇದನಾಶೀಲರಹಿತವಾಗಿತ್ತು, ಅಪ್ರಯೋಜಕ ಮತ್ತು ರಾಷ್ಟ್ರೀಯ ಭದ್ರತೆ ವಿಚಾರದಲ್ಲೂ ಕಾಳಜಿ ಹೊಂದಿರರಲಿಲ್ಲ ಎಂಬುದು ಗೊತ್ತಾಗುತ್ತದೆ’ಎಂದು ಟೀಕಿಸಿದ್ದಾರೆ.

ಭಾಟಿಯಾ ಟೀಕೆಗೆ ಟ್ವೀಟ್ ಮೂಲಕ ಪ್ರತಕ್ರಿಯಿಸಿರುವ ತಿವಾರಿ, ‘ಭಾರತದ ಮೇಲೆ ಪ್ರಭಾವ ಬೀರಿದ ರಾಷ್ಟ್ರೀಯ ಭದ್ರತಾ ಪರಿಸ್ಥಿತಿಗಳ ಅಸಮರ್ಪಕ ನಿರ್ವಹಣೆ ಕುರಿತ 304-ಪುಟಗಳ ಪುಸ್ತಕದ ಒಂದು ಆಯ್ದ ಭಾಗಕ್ಕೆ ಬಿಜೆಪಿಯ ಪ್ರತಿಕ್ರಿಯೆಯನ್ನು ಕಂಡು ನನಗೆ ನಗು ಬರುತ್ತಿದೆ. ರಾಷ್ಟ್ರೀಯ ಭದ್ರತೆಯನ್ನು ಅವರು(ಬಿಜೆಪಿ ಸರ್ಕಾರ) ನಿರ್ವಹಿಸಿದ ರೀತಿ ಬಗ್ಗೆ ಇರುವ ಕೆಲವು ವಿಶ್ಲೇಷಣೆಗಳಿಗೆ ಇದೇ ರೀತಿ ಪ್ರತಿಕ್ರಿಯಿಸುತ್ತಾರಾ?’ ಎಂದು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.