ಗುವಾಹಟಿ: ‘ಧರ್ಮದ ಆಧಾರದ ಮೇಲೆಯೇ ದೇಶ ವಿಭಜನೆಯಾಗಿದೆ. ಹೀಗಾಗಿ, ಪಾಕಿಸ್ತಾನವು ಇಸ್ಲಾಂ ರಾಷ್ಟ್ರವೆಂದು ಘೋಷಿಸಿಕೊಂಡಂತೆ, ಭಾರತವನ್ನು ಸಹ ಹಿಂದೂ ರಾಷ್ಟ್ರವನ್ನಾಗಿ ಘೋಷಿಸಬೇಕಿತ್ತು. ಆದರೆ, ಇದು ಜಾತ್ಯತೀತ ರಾಷ್ಟ್ರವಾಗಿ ಉಳಿಯಿತು’ ಎಂದು ಮೇಘಾಲಯ ಹೈಕೋರ್ಟ್ನ ಪೀಠ ಅಭಿಪ್ರಾಯಪಟ್ಟಿದೆ.
ಮೇಘಾಲಯದಲ್ಲಿನ ವಾಸಿಸುವ ಪ್ರಮಾಣ ಪತ್ರ ನೀಡಲು ನಿರಾಕರಿಸಿರುವುದನ್ನು ಪ್ರಶ್ನಿಸಿ ಅಮೋಲ್ ರಾಣಾ ಎನ್ನುವವರು ಸಲ್ಲಿಸಿದ್ದ ಅರ್ಜಿಯ ಬಗ್ಗೆ 37 ಪುಟಗಳ ತೀರ್ಪು ನೀಡಿದ ವೇಳೆ ನ್ಯಾಯಮೂರ್ತಿ ಎಸ್.ಎಸ್. ಸೇನ್ ಈ ವಿಷಯ ಉಲ್ಲೇಖಿಸಿದ್ದಾರೆ.
‘ಬಾಂಗ್ಲಾದೇಶ, ಪಾಕಿಸ್ತಾನ ಹಾಗೂ ಅಫ್ಗಾನಿಸ್ತಾನದಿಂದ ಭಾರತಕ್ಕೆ ಬಂದಿರುವ ಎಲ್ಲ ಹಿಂದೂಗಳು, ಸಿಖ್ಖರು, ಜೈನರು, ಬೌದ್ಧರು, ಪಾರ್ಸಿಗಳು, ಕ್ರೈಸ್ತರು, ಖಾಸಿಸ್, ಜೈಂತಿಯಾಸ್ ಮತ್ತು ಗಾರೋಸ್ ಸಮುದಾಯದವರನ್ನು ಯಾವುದೇ ರೀತಿ ಪ್ರಶ್ನೆ ಮಾಡದೆ ಮತ್ತು ದಾಖಲೆಗಳನ್ನು ಕೇಳದೆ ಭಾರತದ ಪೌರತ್ವ ನೀಡಬೇಕು. ಇದಕ್ಕಾಗಿ, ಕೇಂದ್ರ ಸರ್ಕಾರ ಶಾಸನ ರೂಪಿಸಬೇಕು’ ಎಂದು ಸೇನ್ ತೀರ್ಪಿನಲ್ಲಿ ಹೇಳಿದ್ದಾರೆ.
‘ಭಾರತ ಮೂಲದ ಹಿಂದೂ ಮತ್ತು ಸಿಖ್ಖರಿಗೂ ಇದೇ ರೀತಿಯ ನೀತಿಯನ್ನು ಅನುಸರಿಸಬೇಕು. ವಿದೇಶದಲ್ಲಿ ನೆಲೆಸಿರುವ ಇವರು ಭಾರತಕ್ಕೆ ಬಂದಾಗ ಸಹಜವಾಗಿಯೇ ಭಾರತೀಯ ನಾಗರಿಕರನ್ನಾಗಿ ಪರಿಗಣಿಸಬೇಕು’ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.