ಬಾಲೇಶ್ವರ(ಒಡಿಶಾ): ನೆಲದಿಂದ ಆಗಸಕ್ಕೆ ಕ್ಷಿಪ್ರವಾಗಿ ಚಿಮ್ಮಿ ಗುರಿಯನ್ನು ನಾಶ ಮಾಡಬಲ್ಲ ಕ್ಷಿಪಣಿ ವ್ಯವಸ್ಥೆಯ (ಕ್ಯೂಆರ್ಎಸ್ಎಎಂ) ಪರೀಕ್ಷಾರ್ಥ ಉಡಾವಣೆ ಚಾಂದಿಪುರ ಸಮೀಪವಿರುವ ಸಮಗ್ರ ಪರೀಕ್ಷಾ ವಲಯದಲ್ಲಿ ಗುರುವಾರ ಯಶಸ್ವಿಯಾಯಿತು.
ಒಟ್ಟು ಆರು ಪರೀಕ್ಷೆಗಳನ್ನು ನೆರವೇರಿಸಲಾಗಿದೆ. ವಾಯುಪ್ರದೇಶದ ಮೂಲಕ ಎದುರಾಗಬಹುದಾದ ವಿವಿಧ ಸ್ವರೂಪದ ಅಪಾಯಕಾರಿ ಗುರಿಗಳನ್ನು ಕರಾವಾರುಕ್ಕಾಗಿ ಹೊಡೆದುರುಳಿಸುವ ಈ ಕ್ಷಿಪಣಿ ವ್ಯವಸ್ಥೆಯ ಸಾಮರ್ಥ್ಯವನ್ನು ಮೌಲ್ಯಮಾಪನ ಮಾಡಲಾಯಿತು ಎಂದು ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ತಿಳಿಸಿದೆ.
‘ಈ ಪರೀಕ್ಷೆ ವೇಳೆ, ಕ್ಷಿಪಣಿ ವ್ಯವಸ್ಥೆಯು ಎಲ್ಲ ನಿರ್ದೇಶಿತ ಗುರಿಗಳನ್ನು ನಿಖರವಾಗಿ ತಲುಪಿತು ಈ ಕ್ಷಿಪಣಿ ವ್ಯವಸ್ಥೆಯ ಕಾರ್ಯಸಾಧನೆಯನ್ನು ಟೆಲಿಮೆಟ್ರಿ, ರಾಡಾರ್ ಹಾಗೂ ಎಲೆಕ್ಟ್ರೊ ಆಪ್ಟಿಕಲ್ ಟ್ರ್ಯಾಕಿಂಗ್ ಸಿಸ್ಟಮ್ಸ್ನಂತಹ ವಿವಿಧ ಸಾಧನ/ತಂತ್ರಾಂಶಗಳನ್ನು ಬಳಸಿ ಖಚಿತಪಡಿಸಿಕೊಳ್ಳಲಾಯಿತು’ ಎಂದು ಡಿಆರ್ಡಿಒ ತಿಳಿಸಿದೆ.
‘ಈ ಕ್ಷಿಪಣಿ ವ್ಯವಸ್ಥೆಯು ಈಗ ಸೇನೆಗೆ ಸೇರ್ಪಡೆ ಮಾಡಲು ಸಿದ್ಧವಾಗಿದೆ’ ಎಂದೂ ಸಂಸ್ಥೆ ತಿಳಿಸಿದೆ.
ಕ್ಷಿಪಣಿ ವ್ಯವಸ್ಥೆಯ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿರುವುದಕ್ಕಾಗಿ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಡಿಆರ್ಡಿಒ ಹಾಗೂ ಸೇನೆಯನ್ನು ಅಭಿನಂದಿಸಿದ್ದಾರೆ.
ಕ್ಯೂಆರ್ಎಸ್ಎಂ ವೈಶಿಷ್ಟ್ಯಗಳು
* ಚಲನೆಯ ಸಮಯದಲ್ಲಿಯೂ ಈ ಕ್ಷಿಪಣಿ ವ್ಯವಸ್ಥೆಯ ಕಾರ್ಯಾಚರಣೆ ಸಾಧ್ಯ
* ಅಪಾಯಗಳನ್ನು ಪತ್ತೆ ಹಾಗೂ ಅವುಗಳ ಮೇಲೆ ನಿಗಾ ಇಡುವ ಸಾಮರ್ಥ್ಯ
* ನಿಖರವಾಗಿ ಗುರಿ ನಾಶ ಮಾಡುವುದು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.