ರಾಹುಲ್ ಗಾಂಧಿ
ಪಿಟಿಐ ಚಿತ್ರ
ನವದೆಹಲಿ: ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದದ ಕುರಿತು ಟೀಕೆ ಮುಂದುವರಿಸಿರುವ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ‘ಕೇಂದ್ರ ಸರ್ಕಾರವು ಟ್ರಂಪ್ ಜತೆ ಒಪ್ಪಂದ ಮಾಡಿಕೊಳ್ಳುವ ಮೂಲಕ ಅವರಿಗೆ ಶರಣಾಗಿದೆ. ರೈತರ ಹಿತಾಸಕ್ತಿಯನ್ನು ಕೂಡ ಬಲಿಕೊಟ್ಟಿದೆ. ಈ ಒಪ್ಪಂದವು ಭಾರತ ಮಾತೆಯನ್ನು ಮಾರಿದಂತೆ’ ಎಂದು ಕಿಡಿಕಾರಿದ್ದಾರೆ.
ಕೇಂದ್ರ ಸರ್ಕಾರದ ಬಜೆಟ್ ಕುರಿತ ಚರ್ಚೆಯಲ್ಲಿ ರಾಹುಲ್ ಗಾಂಧಿ ಮಾತನಾಡಿದ್ದಾರೆ.
ನೀವು(ಕೇಂದ್ರ ಸರ್ಕಾರ) ಭಾರತವನ್ನು, ಭಾರತ ಮಾತೆಯನ್ನು ಮಾರುತ್ತೀದ್ದಿರಾ.. ಇದನ್ನು ಮಾಡಲು ನಿಮಗೆ ನಾಚಿಕೆಯಾಗುವುದಿಲ್ಲವೇ ? ಎಂದು ಕಿಡಿಕಾರಿದ್ದಾರೆ.
ಭಾರತಕ್ಕೆ ಹಾನಿ ಉಂಟುಮಾಡುವ ಈ ಒಪ್ಪಂದವನ್ನು ಮೋದಿ ಸೇರಿದಂತೆ ಯಾರೇ ಪ್ರಧಾನಿಯಾಗಿದ್ದರು ಕೂಡ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಯಾವುದೊ ಬಾಹ್ಯ ಒತ್ತಡದಿಂದ ಅಮೆರಿಕ ಜತೆ ಮೋದಿ ಸರ್ಕಾರ ಒಪ್ಪಂದ ಮಾಡಿಕೊಂಡಿದೆ ಎಂದು ಆರೋಪಿಸಿದ್ದಾರೆ.
ಒಂದು ವೇಳೆ ‘ಇಂಡಿಯಾ’ ಒಕ್ಕೂಟವು ಅಧಿಕಾರದಲ್ಲಿದ್ದು, ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದಕ್ಕೆ ಮುಂದಾಗಿದ್ದರೆ, ಟ್ರಂಪ್ ಅವರಿಗೆ ಭಾರತವನ್ನು ಅಮೆರಿಕದಷ್ಟೇ ಸಮಾನವಾಗಿ ಕಾಣುವಂತೆ ಹೇಳುತ್ತಿದ್ದೆವು ಎಂದಿದ್ದಾರೆ.
ಭಾರತವು ಯಾರಿಂದ ತೈಲ ಖರೀದಿಸಬೇಕು ಎನ್ನುವುದನ್ನು ಕೂಡ ಅಮೆರಿಕವೇ ನಿರ್ಧರಿಸುತ್ತಿದೆ. ಒಂದು ವೇಳೆ ನಾವು ಅವರು(ಅಮೆರಿಕ) ಹೇಳಿದಂತೆ ನಡೆದುಕೊಳ್ಳದಿದ್ದರೆ ನಮ್ಮ ಮೇಲೆ ಬೆದರಿಕೆಯ ರೀತಿಯಲ್ಲಿ ಹೆಚ್ಚುವರಿ ಸುಂಕ ವಿಧಿಸುತ್ತಾರೆ ಎಂದು ಹೇಳಿದ್ದಾರೆ.
ಮೋದಿಯವರು ಇತ್ತೀಚೆಗೆ ಮಾತನಾಡುವಾಗ, ಯುದ್ಧಗಳ ಕಾಲ ಮುಗಿಯಿತು ಎಂದಿದ್ದರು. ಆದರೆ, ಇಂದಿಗೂ ಜಗತ್ತಿನಾದ್ಯಂತ ಹಲವು ಭಾಗಗಳಲ್ಲಿ ಸಂಘರ್ಷಗಳಾಗುತ್ತಿವೆ. ಭಾರತದ ಮೇಲೂ ಯುದ್ಧದ ನೆರಳಿದೆ. ಇಂತಹ ಸಂದರ್ಭದಲ್ಲಿ ನಾವು ನಮ್ಮ ಶಕ್ತಿಯನ್ನು ಅರಿತುಕೊಳ್ಳಬೇಕು. ನಮ್ಮ ಪ್ರಮುಖ ಶಕ್ತಿ, ಈ ದೇಶದ ಜನರಾಗಿದ್ದಾರೆ ಎಂದು ಹೇಳಿದ್ದಾರೆ.
ಅಮೆರಿಕದ ಒತ್ತಡದಿಂದ ಮೋದಿ, ದೇಶವನ್ನು ಮಾರುತ್ತಿದ್ದಾರೆ. ಆದರೆ, ದೇಶದ ನಾಗರಿಕರ ಮಾಹಿತಿ, ಆಹಾರ ಸರಪಳಿ ಹಾಗೂ ಇಂಧನ ಸುರಕ್ಷತೆಯನ್ನು ಕಾಪಾಡಿಕೊಳ್ಳಬೇಕಾಗಿದೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.