ನವದೆಹಲಿ: ದುಬೈ ಮತ್ತು ಸಿಂಗಾಪುರ್ನಿಂದ ಭಾರತೀಯ ವಾಯುಪಡೆಯು (ಐಎಎಫ್) ಒಂಭತ್ತು ಕ್ರಯೋಜೆನಿಕ್ ಆಕ್ಸಿಜನ್ ಕಂಟೇನರ್ಗಳನ್ನು ಏರ್ಲಿಫ್ಟ್ ಮಾಡಿದೆ. ಅವುಗಳನ್ನು ಪಶ್ಚಿಮ ಬಂಗಾಳದ ಪಾನಾಗಡ ವಾಯು ನೆಲೆಗೆ ತರಲಾಗಿದೆ ಎಂದು ಬುಧವಾರ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
ಇದರೊಂದಿಗೆ ಭಾರತೀಯ ವಾಯುಪಡೆಯ ಸಿ–17 ವಿಮಾನಗಳು ಮಂಗಳವಾರ, ಎರಡು ಕ್ರಯೋಜೆನಿಕ್ ಆಕ್ಸಿಜನ್ ಕಂಟೇನರ್ಗಳನ್ನು ಇಂದೋರ್ನಿಂದ ಜಾಮ್ನಗರ್ಗೆ, ಜೋಧ್ಪುರ ಮತ್ತು ಉದಯಪುರದಿಂದ ಜಾಮ್ನಗರ್ಗೆ ಹಾಗೂ ಹಿಂಡನ್ನಿಂದ ರಾಂಚಿಗೆ ತಲುಪಿಸಲಾಗಿದೆ.
ಸಿ–17 ವಿಮಾನಗಳ ಮೂಲಕ ದುಬೈನಿಂದ ಪಾನಾಗಡ ವಾಯುನೆಲೆಗೆ 6 ಕ್ರಯೋಜೆನಿಕ್ ಆಕ್ಸಿಜನ್ ಕಂಟೇನರ್ಗಳು ಹಾಗೂ ಸಿಂಗಾಪುರದಿಂದ ಮೂರು ಕಂಟೇನರ್ಗಳನ್ನು ತರಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಹೈದರಾಬಾದ್ನಿಂದ ಭುವನೇಶ್ವರಕ್ಕೆ 8 ಕಂಟೇನರ್ಗಳು, ಭೋಪಾಲ್ನಿಂದ ರಾಂಚಿಗೆ 2 ಕಂಟೇನರ್ಗಳು ಹಾಗೂ ಚಂಡೀಗಢದಿಂದ ರಾಂಚಿಗೆ 2 ಕಂಟೇನರ್ಗಳನ್ನು ತಲುಪಿಸಲಾಗಿದೆ.
ಭಾರತದಲ್ಲಿ ಕೊರೊನಾ ವೈರಸ್ ಎರಡನೇ ಅಲೆಯ ತೀವ್ರತೆಯಿಂದಾಗಿ ಕೋವಿಡ್–19 ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದ್ದು, ಹಲವು ರಾಜ್ಯಗಳಲ್ಲಿ ಆಸ್ಪತ್ರೆಗಳಿಗೆ ವೈದ್ಯಕೀಯ ಆಕ್ಸಿಜನ್ ಕೊರತೆ ಎದುರಾಗಿದೆ. ಆಕ್ಸಿಜನ್ ಕಂಟೇನರ್ಗಳ ಭರ್ತಿ ಪ್ರಕ್ರಿಯೆ ಮತ್ತು ಪೂರೈಕೆಗೆ ವೇಗ ನೀಡುವ ನಿಟ್ಟಿನಲ್ಲಿ ಭಾರತೀಯ ವಾಯುಪಡೆಯು ಖಾಲಿ ಆಕ್ಸಿಜನ್ ಕಂಟೇನರ್ಗಳನ್ನು ಆಕ್ಸಿಜನ್ ಭರ್ತಿ ಮಾಡುವ ಕೇಂದ್ರಗಳಿಗೆ ತಲುಪಿಸುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.