ನವದೆಹಲಿ: ‘ಭಾರತವು ಶಾಂತಿಗೆ ಬದ್ಧವಾಗಿದೆ. ಆದರೆ, ದೇಶದ ಭದ್ರತೆಗೆ ಎದುರಾಗುವ ಯಾವುದೇ ಅಪಾಯವನ್ನು ಎದುರಿಸಲು ನಮ್ಮ ಸೇನಾ ಪಡೆಗಳು ಸನ್ನದ್ಧವಾಗಿವೆ’ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಸೋಮವಾರ ಹೇಳಿದರು.
72ನೇ ಗಣರಾಜ್ಯೋತ್ಸವದ ಮುನ್ನಾದಿನದ ತಮ್ಮ ಭಾಷಣದಲ್ಲಿ, ಚೀನಾದ ವಿಸ್ತರಣಾವಾದಕ್ಕೆ ಉತ್ತರವೆಂಬಂತೆ ಮಾತನಾಡಿದ ಅವರು, ‘ಯಾವುದೇ ಬೆಲೆ ತೆತ್ತಾದರೂ ರಾಷ್ಟ್ರದ ಹಿತಾಸಕ್ತಿಯನ್ನು ಕಾಪಾಡಲಾಗುವುದು. ಕಳೆದ ವರ್ಷ ನಾವು ಗಡಿಯಲ್ಲಿ ವಿಸ್ತರಣಾ ವಾದದ ಸವಾಲನ್ನು ಎದುರಿಸಿದೆವು. ನಮ್ಮ ವೀರ ಯೋಧರು, ವಿರೋಧಿಗಳ ಉದ್ದೇಶ ವನ್ನು ವಿಫಲಗೊಳಿಸಿದರು. ಅವರಲ್ಲಿ 20 ಯೋಧರು ಹುತಾತ್ಮರಾದರು. ಈ ಯೋಧರ ತ್ಯಾಗಕ್ಕೆ ರಾಷ್ಟ್ರವು ಋಣಿಯಾಗಿರುತ್ತದೆ’ ಎಂದರು.
‘ಭಾರತ–ಚೀನಾ ಗಡಿಯಲ್ಲಿ ಒಂಬತ್ತು ತಿಂಗಳುಗಳಿಂದ ಉದ್ವಿಗ್ನತೆ ಇದೆ. ಮೈನಸ್ 50ರಿಂದ 60ಡಿಗ್ರಿ ಸೆಲ್ಸಿಯಸ್ ತಾಪಮಾನದ ಗಾಲ್ವನ್ ಕಣಿವೆ ಯಿಂದ, ಜೈಸಲ್ಮೇರ್ನ 50ಡಿಗ್ರಿ ಸೆಲ್ಸಿಯಸ್ ನ ಸುಡುಬಿಸಿಲಿನ ಪ್ರದೇಶದವರೆಗೆ, ಭೂಮಿ, ಆಕಾಶ ಹಾಗೂ ವಿಸ್ತಾರ
ವಾದ ಕರಾವಳಿಯುದ್ದಕ್ಕೂ ನಮ್ಮ ಸೈನಿಕರು ಎಚ್ಚರದಿಂದಿದ್ದಾರೆ. ಅವರ ತ್ಯಾಗ, ದೇಶಭಕ್ತಿಯ ಬಗ್ಗೆ ಪ್ರತಿ ಭಾರತೀ
ಯನಿಗೂ ಹೆಮ್ಮೆ ಇದೆ’ ಎಂದರು.
ಕೃಷಿ ಕಾಯ್ದೆಗಳ ರದ್ದತಿಗೆ ಒತ್ತಾಯಿಸಿ ನಡೆಯುತ್ತಿರುವ ರೈತರ ಪ್ರತಿಭಟನೆಯನ್ನು ಉಲ್ಲೇಖಿಸಿ, ‘ಮೂರು ಕೃಷಿ ಕಾಯ್ದೆಗಳ ಬಗ್ಗೆ ರೈತರು ಭಯಪಡುವ ಅಗತ್ಯವಿಲ್ಲ. ಸುಧಾರಣೆಯ ಹಾದಿಯಲ್ಲಿ ಆರಂಭದಲ್ಲಿ ಕೆಲವು ತಪ್ಪುಗ್ರಹಿಕೆಗಳು ಹುಟ್ಟಿಕೊಂಡಿರಬಹುದು. ಆದರೆ ಸರ್ಕಾರವು ರೈತರ ಅಭಿವೃದ್ಧಿಗೆ ಬದ್ಧವಾಗಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.