ADVERTISEMENT

ಎಲ್‌ಎಸಿಯಲ್ಲಿ ಸೇನೆ ನಿಯೋಜಿಸಿದ ಭಾರತ: ಅಧಿಕಾರಿ ಮಾಹಿತಿ

ರಾಯಿಟರ್ಸ್
Published 1 ಸೆಪ್ಟೆಂಬರ್ 2020, 15:07 IST
Last Updated 1 ಸೆಪ್ಟೆಂಬರ್ 2020, 15:07 IST
ಲಡಾಕ್‌ನಲ್ಲಿ ಭಾರತೀಯ ಸೇನೆಯ ವಾಹನಗಳು
ಲಡಾಕ್‌ನಲ್ಲಿ ಭಾರತೀಯ ಸೇನೆಯ ವಾಹನಗಳು    

ದೆಹಲಿ: ಪೂರ್ವ ಲಡಾಕ್‌ನ ಪಾಂಗಾಂಗ್‌ ಸರೋವರದ ದಕ್ಷಿಣ ದಂಡೆಯ ಪರ್ವತವೊಂದನ್ನು ವಶಪಡಿಸಿಕೊಳ್ಳುವ ಚೀನಾದ ಪ್ರಯತ್ನವನ್ನು ವಿಫಲಗೊಳಿಸಿರುವ ಭಾರತೀಯ ಸೇನೆ, ಯುದ್ಧತಂತ್ರದ ದೃಷ್ಟಿಯಿಂದ ಮಹತ್ವ ಪಡೆದ ನಾಲ್ಕು ಗಿರಿಶಿಖರಗಳಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸಿದೆ. ಈ ಕುರಿತು ಸರ್ಕಾರದ ಮಟ್ಟದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಇತ್ತೀಚಿನ ಘಟನೆಯ ಬಗ್ಗೆ ಸರ್ಕಾರದ ಮಟ್ಟದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ‘ಶನಿವಾರ ತಡರಾತ್ರಿ ಪ್ರಮುಖ ಪರ್ವತದ ಮೂಲಕ ಹಾದು ಮುಂದೆ ಬರಲು ಚೀನಾ ಗಡಿ ಭದ್ರತಾಪಡೆಗಳು ಪ್ರಯತ್ನ ನಡೆಸಿದವು. ಅದಕ್ಕೆ ಭಾರತೀಯ ಸೈನ್ಯವು ಸೂಕ್ತ ಪ್ರತಿಕ್ರಿಯೆ ನೀಡಿ ಹಿಮ್ಮೆಟ್ಟಿಸಿದೆ. ಚೀನೀಯರು ಕಣ್ಣು ಹಾಕಿದ್ದ ನಾಲ್ಕು ಪರ್ವತಗಳ ಮೇಲೆ ನಾವು ಪಾರಮ್ಯ ಸಾಧಿಸಿದ್ದೇವೆ. ಈ ನಾಲ್ಕು ಪರ್ವತಗಳು ಎಲ್‌ಎಸಿಯಲ್ಲಿ ಭಾರತದ ಕಡೆಗೆ ಇರುವಂಥವಾಗಿವೆ ’ ಎಂದು ಹೇಳಿದ್ದಾರೆ.

‘ಚೀನಾದ ಸೈನಿಕರು ಮಿಲಿಟರಿ ವಾಹನಗಳ ಬಲದೊಂದಿಗೇ ಗಡಿ ದಾಟುವವರಿದ್ದರು. ಭಾರತೀಯ ಭದ್ರತಾ ಪಡೆಗಳಿಗೆ ಅವರು ತೀರ ಸನಿಹದಲ್ಲೇ ಇದ್ದರು. ಆದರೆ, ಎರಡೂ ಪಡೆಗಳ ನಡುವೆ ಮೌಖಿಕ ವಾದಗಳು ನಡೆದವೇ ಹೊರತು, ಘರ್ಷಣೆ ಸಂಭವಿಸಿಲ್ಲ,’ ಎಂದು ಅವರು ತಿಳಿಸಿದ್ದಾರೆ.

ADVERTISEMENT

‘ಸದ್ಯ ಚೀನಾ ಪಡೆಗಳು ಸರೋವರದ ಉತ್ತರ ದಂಡೆಯಲ್ಲಿ ಬೀಡು ಬಿಟ್ಟಿದ್ದು, ಸನ್ನದ್ದು ಸ್ಥಿತಿಯಲ್ಲಿವೆ. ಆ ಪ್ರದೇಶವು ಚೀನಾದ ರಕ್ಷಣಾ ಕಾರ್ಯತಂತ್ರದ ಹೊಸ ನೆಲೆಯಾಗಿದೆ,’ ಎಂದೂ ಅಧಿಕಾರಿ ಹೇಳಿದ್ದಾರೆ.

ಪಾಂಗಾಂಗ್‌ ಸರೋವರದ ದಕ್ಷಿಣ ದಂಡೆಯಲ್ಲಿ ಈ ಘಟನೆ ನಡೆದಿದ್ದು, ಇದೇ ಪ್ರದೇಶದಲ್ಲಿ ಎರಡೂ ಕಡೆಗಳ ಸೈನಿಕರು ಏಪ್ರಿಲ್‌ನಿಂದಲೂ ಮುಖಾಮುಖಿಯಾಗಿದ್ದಾರೆ.
ಆದರೆ, ಚೀನಾ ಇದಕ್ಕೆ ತದ್ವಿರುದ್ಧದ ಹೇಳಿಕೆಗಳನ್ನು ಮಂಗಳವಾರ ಬೆಳಗ್ಗೆ ನೀಡಿದೆ. ‘ಚೀನಾ ಎಂದಿಗೂ ಯಾವುದೇ ಯುದ್ಧ ಅಥವಾ ಸಂಘರ್ಷವನ್ನು ಪ್ರಚೋದಿಸಿಲ್ಲ. ಇತರ ದೇಶದ ಭೂಪ್ರದೇಶದ ಒಂದು ಇಂಚನ್ನೂ ಆಕ್ರಮಿಸಿಕೊಂಡಿಲ್ಲ. ಚೀನಾದ ಸೇನೆ ಎಂದಿಗೂ ಗಡಿ ದಾಟಿಲ್ಲ. ಬಹುಶಃ ಸ್ವಲ್ಪ ಸಂವಹನ ಸಮಸ್ಯೆಗಳಿವೆ,’ ಎಂದು ಚೀನಾದ ವಿದೇಶಾಂಗ ಇಲಾಖೆಯ ವಕ್ತಾರೆ ಹುವಾ ಚುನೈಂಗ್‌ ಅಭಿಪ್ರಾಯಪಟ್ಟಿದ್ದಾರೆ.

ಇನ್ನೊಂದೆಡೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಭಾರತದಲ್ಲಿರುವ ಚೀನಾ ರಾಯಭಾರ ಕಚೇರಿ, ‘ಪಾಂಗಾಂಗ್‌ ತ್ಸೊ ಸರೋವರದ ದಕ್ಷಿಣ ದಂಡೆ ಮತ್ತು ರೆಕಿನ್ ಪಾಸ್ ಬಳಿ ಆಗಸ್ಟ್ 31 ರಂದು ಭಾರತೀಯ ರಕ್ಷಣಾ ಪಡೆಗಳು ವಾಸ್ತವ ಗಡಿ ನಿಯಂತ್ರಣಾ ರೇಖೆಯನ್ನು ಅತಿಕ್ರಮಿಸಿವೆ. ಈ ಮೂಲಕ ಸ್ಪಷ್ಟವಾದ ಪ್ರಚೋದನೆ ನೀಡಿವೆ ಗಡಿಯಲ್ಲಿನ ಸಮಸ್ಯೆಗಳನ್ನು ಶಮನಗೊಳಿಸಲು ದೀರ್ಘಕಾಲವಧಿಯಲ್ಲಿ ಮಾಡಲಾಗಿರುವ ಎಲ್ಲ ಪ್ರಯತ್ನಗಳಿಗೆ ವಿರುದ್ಧವಾದ ಕೃತ್ಯವನ್ನು ಭಾರತ ಸದ್ಯ ಮಾಡಿದೆ. ಭಾರತ ತನ್ನ ಮುಂಚೂಣಿ ಸೈನಿಕರನ್ನು ನಿಯಂತ್ರಿಸಬೇಕು. ನಿರ್ಬಂಧಿಸಬೇಕು,’ ಎಂದು ಒತ್ತಾಯಿಸಿದೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.