ADVERTISEMENT

ಭವಿಷ್ಯದ ಯುದ್ಧಗಳಿಗೆ ಭಾರತೀಯ ಸೇನೆ ಸನ್ನದ್ಧ: ಸೇನಾ ಮುಖ್ಯಸ್ಥ ಉಪೇಂದ್ರ ದ್ವಿವೇದಿ

ಪಿಟಿಐ
Published 15 ಜನವರಿ 2026, 11:10 IST
Last Updated 15 ಜನವರಿ 2026, 11:10 IST
<div class="paragraphs"><p>ಸೇನಾ ಮುಖ್ಯಸ್ಥ ಜನರಲ್‌ ಉಪೇಂದ್ರ ದ್ವಿವೇದಿ</p></div>

ಸೇನಾ ಮುಖ್ಯಸ್ಥ ಜನರಲ್‌ ಉಪೇಂದ್ರ ದ್ವಿವೇದಿ

   

ಪಿಟಿಐ ಚಿತ್ರ

ಜೈಪುರ: ‘ನಮ್ಮ ಸೇನೆ ಭವಿಷ್ಯದ ಯುದ್ಧಗಳಿಗೆ ಸನ್ನದ್ಧಗೊಳ್ಳುತ್ತಿದೆ. ನಾವು ಸ್ವದೇಶಿ ನಿರ್ಮಿತ ಯುದ್ಧೋಪಕರಣಗಳನ್ನು ಹೊಂದುವುದು ಸದ್ಯದ ಅಗತ್ಯವಾಗಿದೆ. ಇದು ಕಾರ್ಯತಂತ್ರದ ಅನಿವಾರ್ಯವೂ ಹೌದು’ ಎಂದು ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಗುರುವಾರ ಹೇಳಿದರು.

ADVERTISEMENT

ಇಲ್ಲಿ ನಡೆದ 78ನೇ ಸೇನಾ ದಿನದ ಪಥಸಂಚಲನದಲ್ಲಿ ಪಾಲ್ಗೊಂಡು ಪತ್ರಕರ್ತರೊಂದಿಗೆ ಅವರು ಮಾತನಾಡಿದರು. ‘ಸುಸಜ್ಜಿತ ಸೈನಿಕರು, ಆಧುನಿಕ ಉಪಕರಣಗಳು, ಏಕೀಕೃತ ಕಾರ್ಯಾಚರಣೆ ಸಾಮರ್ಥ್ಯವನ್ನು ಭಾರತೀಯ ಸೇನೆ ಒಳಗೊಂಡಿದೆ. ಯೋಧರನ್ನು ಇನ್ನಷ್ಟು ಸಮರ್ಥಗೊಳಿಸಲು ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗುತ್ತಿದೆ’ ಎಂದರು.

‘ಯಾವುದೇ ಯುದ್ಧವನ್ನು ಮೊದಲೇ ಊಹಿಸಲಾಗದು. ಭವಿಷ್ಯದ ಸಮರಗಳು ಕೆಲ ದಿನಗಳಲ್ಲೇ ಮುಗಿಯಬಹುದು ಅಥವಾ ವರ್ಷಗಟ್ಟಲೆ ಸಾಗಬಹುದು’ ಎಂದ ದ್ವಿವೇದಿ ಅವರು, ರಷ್ಯಾ–ಉಕ್ರೇನ್‌ ಸಂಘರ್ಷವನ್ನು ಉದಾಹರಣೆಯಾಗಿ ನೀಡಿದರು.

‘ಕಳೆದ ಕೆಲವು ವರ್ಷಗಳಿಂದೀಚೆಗೆ ಸೇನೆಯ ಪರಿಕಲ್ಪನೆಯೇ ಬದಲಾಗಿದೆ. ಸದ್ಯದ ಸವಾಲನ್ನು ಮಾತ್ರ ನಾವು ಎದುರಿಸುತ್ತಿಲ್ಲ. ಭವಿಷ್ಯದ ಯುದ್ಧಗಳಿಗೂ ಸಜ್ಜಾಗುತ್ತಿದ್ದೇವೆ. ಸಶಸ್ತ್ರೀಕರಣ ಮತ್ತು ತರಬೇತಿ ಸೇರಿದಂತೆ ಭವಿಷ್ಯದ ಅಗತ್ಯಕ್ಕೆ ತಕ್ಕಂತೆ ಆಧುನೀಕರಣ ಆಗುತ್ತಿದೆ’ ಎಂದರು.

‘ಯಾವುದೇ ರೀತಿಯ ದಾಳಿ ಎದುರಿಸಲು, ಎಂಥದ್ದೇ ಸಮಯದಲ್ಲಾದರೂ ಸೇನೆ ತಯಾರಿದೆ. ಪಥಸಂಚಲನದಲ್ಲಿ ನಮ್ಮ ಶಕ್ತಿ ಅನಾವರಣಗೊಂಡಿದೆ. ಇಂತಹ ಪೂರ್ವ ಸಿದ್ಧತೆಗಳು ನಿರಂತವಾಗಿ ನಡೆಯುತ್ತವೆ. ಭಾರತದಲ್ಲಿ ತಯಾರಿಸಿದ ಸೇನಾ ಉಪಕರಣಗಳ ಪ್ರದರ್ಶನವು ನಮ್ಮ ಸ್ವದೇಶೀಕರಣವನ್ನು ಅನಾವರಣಗೊಳಿಸಿದೆ’ ಎಂದು ಹೇಳಿದರು.

‘ಸೇನೆ ಮತ್ತು ಸಾರ್ವಜನಿಕ ಉದ್ದೇಶಕ್ಕಾಗಿ ಭಾರತದಲ್ಲೇ ವಿನ್ಯಾಸಗೊಳಿಸಿ, ತಯಾರಿಸಿದ ಉಪಕರಣಗಳನ್ನು ಭವಿಷಯದಲ್ಲಿ ಬಳಸಬೇಕೆನ್ನುವುದು ಸೇನೆಯ ಉದ್ದೇಶ. ಇದು ಅನಿವಾರ್ಯ ಕಾರ್ಯತಂತ್ರವೂ ಆಗಿದೆ’ ಎಂದರು.

‘ಸಂಶೋಧನೆ ಮತ್ತು ಅಭಿವೃದ್ಧಿ ಮಹತ್ವದ್ದು. ಭಾರತ ಈ ನಿಟ್ಟಿನಲ್ಲಿ ಗಮನಹರಿಸದೇ ಇದ್ದರೆ ಸುದೀರ್ಘ ಯುದ್ಧಗಳನ್ನು ಎದುರಿಸುವುದು ಮತ್ತು ಸ್ವಾವಲಂಬನೆ ಸಾಧಿಸುವುದು ಸಾಧ್ಯವಿಲ್ಲ. ಮಾಹಿತಿ ಸಮರದಲ್ಲಿ ವಿಶ್ವಾಸಾರ್ಹತೆಯೂ ಅಷ್ಟೇ ಮುಖ್ಯ’ ಎಂದು ದ್ವಿವೇದಿ ಅಭಿಪ್ರಾಯಪಟ್ಟರು.

ಭಾರತೀಯ ಸೇನಾ ಶಕ್ತಿ ಅನಾವರಣ

ಜೈಪುರದ ಮಹಲ್ ರಸ್ತೆಯ ಕಂಟೋನ್ಮೆಂಟ್ ಪ್ರದೇಶದಲ್ಲಿ ನಡೆದ 78ನೇ ಸೇನಾ ದಿನದ ಪಥಸಂಚನದಲ್ಲಿ ಭಾರತೀಯ ಸೇನೆಯ ಶಕ್ತಿ ಅನಾವರಣಗೊಂಡಿತು.

ಚೇತಕ್ ಹೆಲಿಕಾಪ್ಟರ್ ಪುಷ್ಪವೃಷ್ಟಿ ನೇಪಾಳ್‌ ಆರ್ಮಿ ಬ್ಯಾಂಡ್‌ ವಾದ್ಯಸಂಗೀತ ಮನಸೂರೆಗೊಂಡಿತು. ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಜನರು ಅಪಾಚೆ ಪ್ರಚಂಡ ಧ್ರುವ್ ಮತ್ತು ರುದ್ರ ಹೆಲಿಕಾಪ್ಟರ್‌ಗಳು ಆಕಾಶದಂಗಳದಲ್ಲಿ ತೋರಿದ ಸಾಹಸವನ್ನು ಕಣ್ತುಂಬಿಕೊಂಡರು.

ಬ್ರಹ್ಮೋಸ್ ಕ್ಷಿಪಣಿ ನಾಗ್ ಕ್ಷಿಪಣಿ ಹೆಲಿನಾ ಕ್ಷಿಪಣಿ ವ್ಯವಸ್ಥೆ ಭೀಷ್ಮ ಟ್ಯಾಂಕ್ ಅರ್ಜುನ್‌ ಟ್ಯಾಂಕ್‌ ಕೆ–9 ವಜ್ರ ಆರ್ಟಿಲರಿ  ಸಮರ ವಿಮಾನ ಉಡಾಯಿಸುವ ಝೆಡ್‌ಯು–23 ಗನ್. ಧನುಶ್ ಶಸ್ತ್ರಾಸ್ತ್ರ ವ್ಯವಸ್ಥೆ ರಾಕೆಟ್ ಉಡಾವಣಾ ವ್ಯವಸ್ಥೆ ಸ್ವಯಂ ಚಾಲಿತ ಟ್ಯಾಂಕರ್‌ ಪ್ರತಿರೋಧಕಗಳು ಡ್ರೋನ್‌ ಜಾಮರ್‌ಗಳು ಅತ್ಯಾಧುನಿಕ ಗನ್‌ಗಳು ಹೀಗೆ ಭಾರತೀಯ ಸೇನೆಯ ಶಸ್ತ್ರಾಸ್ತ್ರ ಬಲವನ್ನು ಪಥಸಂಚಲನದಲ್ಲಿ ಅನಾವರಣ ಮಾಡಲಾಯಿತು.

ಆರ್ಮಿ ಸರ್ವಿಸ್ ಕೋರ್‌ನ ದ್ವಿಚಕ್ರ ವಾಹನ ತಂಡವು ಅಸಾಧಾರಣ ಸಾಹಸವನ್ನು ಪ್ರದರ್ಶನ ಮಾಡಿತು. ಹೊಸದಾಗಿ ರೂಪಿಸಲಾದ ಭೈರವ್‌ ಬೆಟಾಲಿಯನ್ ಮರಾಠಾ ಲೈಟ್ ಇನ್‌ಫೆಂಟ್ರಿ ಮದ್ರಾಸ್ ರಜಪೂತ್‌ ದೋಗ್ರಾ ರೆಜಿಮೆಂಟ್‌ಗಳು ಎನ್‌ಸಿಸಿ ಕೆಡೆಟ್‌ಗಳು ಪಥಸಂಚಲನದಲ್ಲಿ ಶಿಸ್ತುಬದ್ಧ ಹೆಜ್ಜೆ ಹಾಕಿದರು. ಆಪರೇಷನ್‌ ಸಿಂಧೂರ ಕಾರ್ಯಾಚರಣೆಯ ಸ್ತಬ್ಧ ಚಿತ್ರ ಸೇನೆಯ ಹೆಜ್ಜೆಗುರುತುಗಳ ಕಿರುಚಿತ್ರ ಪ್ರದರ್ಶನಗೊಂಡಿತು. ವಿಪತ್ತು ಪರಿಹಾರ ಕಾರ್ಯಾಚರಣೆಯ ಅಣಕು ಪ್ರದರ್ಶನ ನಡೆದವು. ಮೂರು ಸೇನಾಪಡೆಗಳ ಮುಖ್ಯಸ್ಥ ಜನರಲ್‌ ಅನಿಲ್‌ ಚೌಹಾಣ್ ಸೇರಿ ಹಿರಿಯ ಸೇನಾಧಿಕಾರಿಗಳು ಸಾಕ್ಷಿಯಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.