ಮೀರಾ ಕುಮಾರ್
ನವದೆಹಲಿ: ಪ್ರಜಾಪ್ರಭುತ್ವ ಹಾಗೂ ಜಾತಿ ವ್ಯವಸ್ಥೆ ಒಟ್ಟಿಗೆ ಇರಲು ಸಾಧ್ಯವೇ ಇಲ್ಲ ಎಂದು ಲೋಕಸಭೆಯ ಮಾಜಿ ಸ್ಪೀಕರ್ ಮೀರಾ ಕುಮಾರ್ ಅವರು ದೆಹಲಿ ವಿಧಾನಸಭೆಯಲ್ಲಿ ನಡೆದ ಅಖಿಲ ಭಾರತ ಸ್ಪೀಕರ್ಗಳ ಸಮಾವೇಶದಲ್ಲಿ ಸೋಮವಾರ ಹೇಳಿದ್ದಾರೆ.
ಸಮಾವೇಶದ ಎರಡನೇ ದಿನವಾದ ಇಂದು ಮುಖ್ಯ ಭಾಷಣ ಮಾಡಿದ ಅವರು, ಮರದಲ್ಲಿ ಬೆಳೆದು ಅದನ್ನೇ ಹಾನಿ ಮಾಡುವ ಕಳೆಯಂತೆ, ಜಾತಿ ವ್ಯವಸ್ಥೆಯು ಸಮಾಜಕ್ಕೆ ಕಂಟಕ ಎಂದು ನುಡಿದಿದ್ದಾರೆ.
ಲೋಕಸಭೆಯ ಮೊದಲ ಮಹಿಳಾ ಸ್ಪೀಕರ್ ಎನ್ನುವ ಅಗ್ಗಳಿಕೆ ಅವರದ್ದು. ಯುಪಿಎ ಸರ್ಕಾರದಲ್ಲಿ ಅವರು ಲೋಕಸಭಾ ಸ್ಪೀಕರ್ ಆಗಿದ್ದರು.
ಸಮಾನತೆ ಹಾಗೂ ಅಸಮಾನತೆ ಒಟ್ಟಿಗೆ ಇರಲು ಸಾಧ್ಯವಿಲ್ಲ. ಜಾತಿ ವ್ಯವಸ್ಥೆಯ ಸುತ್ತ ಸುತ್ತುವರೆದಿರುವ ಸಮಾನತೆಯ ಪ್ರಜಾಪ್ರಭುತ್ವದ ಹೊರಭಾಗದಲ್ಲಿ ಅಸಮಾನತೆ ಬೆಳೆಯುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಕಳೆಯು ತಾನು ಬೆಳೆದ ಮರವನ್ನೇ ಒಣಗಿಸಿ ತಾನು ಬೆಳೆಯುವಂತೆ, ಜಾತಿ ವ್ಯವಸ್ಥೆ ಸಮಾಜದೊಂದಿಗೆ ಅದೇ ರೀತಿ ಮಾಡುತ್ತದೆ. ಸಮಾನತೆ ಸ್ಥಾಪಿಸುವುದು ಪ್ರಜಾಪ್ರಭುತ್ವದ ಆತ್ಮ ಎಂದು ಹೇಳಿರುವ ಅವರು, ಅದಿಲ್ಲದೆ ಪ್ರಜಾಪ್ರಭುತ್ವಕ್ಕೆ ಜೀವ ಇರುವುದಿಲ್ಲ ಎಂದು ಹೇಳಿದ್ದಾರೆ.
ಬ್ರಿಟಿಷ್ ಆಳ್ವಿಕೆಯಲ್ಲಿ ಕೇಂದ್ರ ವಿಧಾನಸಭೆಗೆ ಆಯ್ಕೆಯಾದ ಮೊದಲ ಭಾರತೀಯ ವಿಠ್ಠಲಭಾಯಿ ಪಟೇಲ್ ಅವರ ಕೊಡುಗೆಯನ್ನು ಉಲ್ಲೇಖಿಸಿದ ಮೀರಾ ಕುಮಾರ್, ಲೋಕಸಭೆಯ ಅಧಿವೇಶನಗಳ ಅಧ್ಯಕ್ಷತೆ ವಹಿಸುವಾಗ ಹೋರಾಟಗಳು ಮತ್ತು ಅನುಭವವು ಅವರಿಗೆ ಸ್ಫೂರ್ತಿ ನೀಡಿತು ಎಂದು ಹೇಳಿದರು.
ಪಟೇಲ್ ಅವರು ಕೇಂದ್ರ ವಿಧಾನಸಭೆಯ ಮೊದಲ ಭಾರತೀಯ ಸ್ಪೀಕರ್ ಆಗಿ ಆಯ್ಕೆಯಾದ ಶತಮಾನೋತ್ಸವದ ಅಂಗವಾಗಿ ದೆಹಲಿ ವಿಧಾನಸಭೆಯಲ್ಲಿ ಮೊದಲ ಬಾರಿಗೆ ಅಖಿಲ ಭಾರತ ಸ್ಪೀಕರ್ಗಳ ಸಮ್ಮೇಳನ ಆಯೋಜಿಸಲಾಗಿದೆ.
ಭಾನುವಾರ ಆರಂಭಗೊಂಡ ಎರಡು ದಿನಗಳ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಪಟೇಲ್ ಸ್ಮರಣಾರ್ಥ ವಿಶೇಷ ಅಂಚೆ ಚೀಟಿಯನ್ನು ಬಿಡುಗಡೆಗೊಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.