ಮಲಪ್ಪುರ (ಕೇರಳ):ಇಲ್ಲಿನ ಸರ್ಕಾರಿ ಶಾಲೆಯೊಂದರಲ್ಲಿ ಸ್ವಾತಂತ್ರ್ಯ ದಿನಾಚರಣೆ ವೇಳೆ ವಿದ್ಯಾರ್ಥಿಯೊಬ್ಬರು ವಿ.ಡಿ. ಸಾವರ್ಕರ್ ವೇಷತೊಟ್ಟಿದ್ದರು ಎಂದು ಆರೋಪಿಸಿ ಹಲವು ಯುವ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದು ಶಾಲೆ ಎದುರು ಪ್ರತಿಭಟನೆಯನ್ನೂ ನಡೆಸಿವೆ.
ಕೀಜೂಪರಂಬಾದಲ್ಲಿರುವ ಸರ್ಕಾರಿ ವೊಕೇಷನಲ್ ಹೈಯರ್ ಸೆಕೆಂಡರಿ ಶಾಲೆಯ ಮುಂದೆ ಯುವ ಕಾಂಗ್ರೆಸ್ ಮತ್ತು ಭಾರತೀಯ ಮುಸ್ಲಿಂ ಲೀಗ್ನ ಯುವ ವಿಭಾಗದ ಸದಸ್ಯರು ಪ್ರತಿಭಟನೆ ನಡೆಸಿದರು. ವಿದ್ಯಾರ್ಥಿಗೆ ಸಾರ್ವಕರ್ ವೇಷತೊಡಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸ್ವಾತಂತ್ರ್ಯ ಹೋರಾಟಗಾರರಂತೆ ವೇಷತೊಟ್ಟ ಮಸುಕು ಮಾಡಲಾಗಿದ್ದ ಮಕ್ಕಳ ಚಿತ್ರಗಳನ್ನು ಸುದ್ದಿ ವಾಹಿನಿವೊಂದು ಪ್ರಸಾರ ಮಾಡಿತ್ತು. ಇದರಲ್ಲಿ ಸಾವರ್ಕರ್ ಹೆಸರನ್ನು ಬರೆದುಕೊಂಡು ಕೊರಳಿಗೆ ಹಾಕಿಕೊಂಡಿದ್ದ ವಿದ್ಯಾರ್ಥಿ ಚಿತ್ರವೂ ಇತ್ತು. ಈ ಚಿತ್ರವು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯಿತು. ನಂತರ ವಿವಾದ ಭುಗಿಲೆದ್ದಿತು.
ಈ ಚಿತ್ರಗಳು ಗ್ರೀನ್ ರೂಮ್ನಿಂದ ತೆಗೆದುಕೊಂಡದ್ದು. ವಿವಾದ ಆಗಬಹುದು ಎಂದು ಯೋಚಿಸಿ, ಮೆರವಣಿಗೆ ಹೊರಡುವುದಕ್ಕೆ ಮೊದಲೇ ಮಗುವಿನ ಕೊರಳಲ್ಲಿ ಇದ್ದ ಸಾವರ್ಕರ್ ಹೆಸರನ್ನು ತೆಗೆಯಲಾಯಿತು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಶಾಲೆಯ ಅಧಿಕಾರಿಗಳು ಈ ವಿವಾದದ ಬಗ್ಗೆ ಈ ವರೆಗೆ ಪ್ರತಿಕ್ರಿಯೆ ನೀಡಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.