ADVERTISEMENT

ಗುರುನಾನಕ್‌ ಜಯಂತಿ: ಪಾಕ್‌ಗೆ ಭೇಟಿ ನೀಡಿದ ಭಾರತೀಯರು

ಪಿಟಿಐ
Published 4 ನವೆಂಬರ್ 2025, 15:37 IST
Last Updated 4 ನವೆಂಬರ್ 2025, 15:37 IST
<div class="paragraphs"><p>ವಾಘಾ ಗಡಿ ಮೂಲಕ ಮಂಗಳವಾರ ಭಾರತೀಯ ಸಿಖ್ಖರು ಪಾಕಿಸ್ತಾನ ಪ್ರವೇಶಿಸಿದರು </p></div>

ವಾಘಾ ಗಡಿ ಮೂಲಕ ಮಂಗಳವಾರ ಭಾರತೀಯ ಸಿಖ್ಖರು ಪಾಕಿಸ್ತಾನ ಪ್ರವೇಶಿಸಿದರು

   

–ಪಿಟಿಐ ಚಿತ್ರ

ಲಾಹೋರ್‌: ಗುರುನಾನಕ್‌ ದೇವ್‌ ಅವರ 556ನೇ ಜಯಂತಿಯ ಅಂಗವಾಗಿ ನಡೆಯಲಿರುವ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದಕ್ಕಾಗಿ 2,100 ಮಂದಿ ಭಾರತೀಯ ಸಿಖ್ಖರು ಮಂಗಳವಾರ ವಾಘಾ ಗಡಿಯ ಮಾರ್ಗವಾಗಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದಾರೆ. 

ADVERTISEMENT

ಪಾಕಿಸ್ತಾನ ಸಿಖ್‌ ಗುರುದ್ವಾರ ಪರಬಂಧಕ್‌ ಸಮಿತಿಯ ಅಧ್ಯಕ್ಷ ಹಾಗೂ ಪಂಜಾಬ್‌ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ ಸರ್ದಾರ್‌ ರಮೇಶ್‌ ಸಿಂಗ್‌ ಅರೋರಾ, ಎವಾಕ್ಯೂ ಟ್ರಸ್ಟ್‌ ಪ್ರಾಪರ್ಟಿ ಬೋರ್ಡ್‌ (ಇಟಿಪಿಬಿ) ಮುಖ್ಯಸ್ಥ ಸಾಜಿದ್‌ ಮೊಹಮ್ಮದ್‌ ಚೌಹಾಣ್‌, ಹೆಚ್ಚುವರಿ ಕಾರ್ಯದರ್ಶಿ ನಾಸಿಕ್‌ ಮುಷ್ತಾಕ್‌ ಅವರು ಭಾರತೀಯ ಸಿಖ್ಖರನ್ನು ವಾಘಾ ಗಡಿಯಲ್ಲಿ ಸ್ವಾಗತಿಸಿದ್ದಾರೆ. 

ಭಾರತೀಯ ಸಿಖ್ಖರ ಪೈಕಿ ಅಕಾಲ್‌ ತಖ್ತ್‌ ನಾಯಕ ಜಾನಿ ಕುಲದೀಪ್‌ ಸಿಂಗ್‌ ಗರ್ಗಾಜ್‌, ಬೀಬಿ ಗುರೀಂದರ್‌ ಕೌರ್‌ ನೇತೃತ್ವದ ಶಿರೋಮಣಿ ಗುರುದ್ವಾರ ಪರಬಂಧಕ್‌ ಸಮಿತಿ ನಿಯೋಗ ಹಾಗೂ ದೆಹಲಿ ಗುರುದ್ವಾರ ನಿರ್ವಹಣಾ ಸಮಿತಿಯ ರವೀಂದರ್‌ ಸಿಂಗ್‌ ಸ್ವೀಟಾ ಅವರೂ ಇದ್ದಾರೆ ಎಂದು ಇಟಿಪಿಬಿ ವಕ್ತಾರ ಗುಲಾಮ್‌ ಮೊಹಿಯುದ್ದೀನ್‌ ಹೇಳಿದ್ದಾರೆ. 

ಅಲ್ಲದೇ, ಪಾಕಿಸ್ತಾನ ಸರ್ಕಾರವು ಗುರುನಾನಕ್‌ ಜಯಂತಿಯಲ್ಲಿ ಪಾಲ್ಗೊಳ್ಳಲು 2,150 ಮಂದಿ ಭಾರತೀಯ ಸಿಖ್ಖರಿಗೆ ವೀಸಾ ಒದಗಿಸಿತ್ತು. ಅದರಂತೆ ಎಲ್ಲಾ ಪ್ರಕ್ರಿಯೆಗಳ ನಂತರ ಸಿಖ್ಖರು ಪಾಕಿಸ್ತಾನ ಪ್ರವೇಶಿಸಿದ್ದಾರೆ. ನವೆಂಬರ್‌ 13ರಂದು ಅವರು ಹಿಂದಿರುಗಲಿದ್ದಾರೆ ಎಂದೂ ಗುಲಾಮ್‌ ಮಾಹಿತಿ ನೀಡಿದ್ದಾರೆ.

ಮೇ ತಿಂಗಳಲ್ಲಿ ಭಾರತ– ಪಾಕಿಸ್ತಾನ ಸಂಘರ್ಷ ನಡೆದ ಬಳಿಕ ಮೊದಲ ಬಾರಿಗೆ ಉಭಯ ರಾಷ್ಟ್ರಗಳ ‌ಪ್ರೆಜೆಗಳು ನೇರವಾಗಿ ಸಂಪರ್ಕಿಸುವ ಅವಕಾಶ ಈ ಮೂಲಕ ಸಿಕ್ಕಂತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.