ನವದೆಹಲಿ: ಸಕಾಲದಲ್ಲಿ ತಪಾಸಣೆ ಹಾಗೂ ಪರಿಣಾಮಕಾರಿ ನಿರ್ವಹಣೆಯಿಂದಾಗಿ ದೇಶದಲ್ಲಿ ಕೋವಿಡ್ನಿಂದ ಗುಣಮುಖರಾದವರ ಪ್ರಮಾಣ ಶೇ 62.93ರಷ್ಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಭಾನುವಾರ ತಿಳಿಸಿದೆ.
ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳ ಸಹಯೋಗದಲ್ಲಿ ಕೇಂದ್ರ ಸರ್ಕಾರ ಕೈಗೊಂಡ ನಿರ್ದಿಷ್ಟ ಮತ್ತು ಹೊಂದಾಣಿಕೆ ಆಧಾರಿತ ಕಾರ್ಯಕ್ರಮ ಇದಕ್ಕೆ ಕಾರಣವಾಗಿದೆ. ಭಾರತದಲ್ಲಿ ಸದ್ಯ ಸಕ್ರಿಯ ಪ್ರಕರಣಗಳಿಗಿಂತ ಗುಣಮುಖರಾಗಿರುವವರ ಸಂಖ್ಯೆ 2,42,362ರಿಂದ ಹೆಚ್ಚಾಗಿದೆ ಎಂದು ಇಲಾಖೆಯು ಹೇಳಿದೆ.
ಸಮಗ್ರ ಕಾರ್ಯಯೋಜನೆಯಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿತರು ಗುಣಮುಖರಾಗುತ್ತಿದ್ದಾರೆ. ಪ್ರಸ್ತುತ ದೇಶದಲ್ಲಿ ಸಕ್ರಿಯ ಪ್ರಕರಣಗಳು 2,42,258 ಇದ್ದರೆ, ಗುಣಮುಖರಾದವರ ಸಂಖ್ಯೆ 5,34,620 ಆಗಿದೆ.ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 19,235 ಮಂದಿ ಗುಣಮುಖರಾಗಿದ್ದಾರೆ ಎಂದೂ ವಿವರಿಸಿದೆ.
ಈ ಮಧ್ಯೆ, ದೇಶದಲ್ಲಿ ಹೊಸದಾಗಿ ಮತ್ತೆ 28,637 ಜನರಿಗೆ ಸೋಂಕು ತಗುಲಿರುವುದು ಭಾನುವಾರ ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಒಟ್ಟು ಸಂಖ್ಯೆ 8,49,553 ಆಗಿದೆ. ಅಲ್ಲದೆ, ಮತ್ತೆ 551 ಜನರು ಸತ್ತಿದ್ದು, ಮೃತರ ಒಟ್ಟು ಸಂಖ್ಯೆ 22,674ಕ್ಕೆ ಏರಿದೆ ಎಂದು ಮಾಹಿತಿ ನೀಡಿದೆ.
ದೇಶದಲ್ಲಿ ಪ್ರಸ್ತುತ 1,370 ನಿಯೋಜಿತ ಕೋವಿಡ್ ಆಸ್ಪತ್ರೆಗಳು, 3,062 ಆರೋಗ್ಯ ಕೇಂದ್ರಗಳು, 10,334 ಆರೈಕೆ ಕೇಂದ್ರಗಳು ಇವೆ ಎಂದು ವಿವರಿಸಿದೆ.
ಐಸಿಎಂಆರ್ ಮೂಲಗಳ ಪ್ರಕಾರ, ಜುಲೈ 11ರವರೆಗೂ ಒಟ್ಟು 1,15,87,153 ಮಾದರಿಗಳ ಪರೀಕ್ಷೆ ನಡೆದಿವೆ. ಶನಿವಾರ ಒಂದೇ ದಿನ 2,80,151 ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.