ನವದೆಹಲಿ: ನ್ಯಾಯಾಲಯ ಕಲಾಪಗಳ ನೇರ ಪ್ರಸಾರಕ್ಕೆ ಸುಪ್ರೀಂ ಕೋರ್ಟ್ ಬುಧವಾರ ಸಮ್ಮತಿ ಸೂಚಿಸಿದ್ದು, ಇನ್ನು ಮುಂದೆ ಸಾರ್ವ
ಜನಿಕರು ಟಿ.ವಿ.ಯಲ್ಲಿ ನ್ಯಾಯಾಲಯ ಕಲಾಪಗಳನ್ನು ವೀಕ್ಷಿಸಬಹುದಾಗಿದೆ.
ನ್ಯಾಯಾಂಗ ವ್ಯವಸ್ಥೆಯ ಕಾರ್ಯವೈಖರಿಯಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ನೇರ ಪ್ರಸಾರಕ್ಕೆ ಅನುಮತಿ ನೀಡಲಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ನೇರ ಪ್ರಸಾರಕ್ಕೂ ಮುನ್ನ ಅನುಸರಿಸಬೇಕಾದ ಅಗತ್ಯ ನಿಯಮಾವಳಿಗಳನ್ನು ರೂಪಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಸುಪ್ರೀಂ ಕೋರ್ಟ್ ಸಾಂವಿಧಾನಿಕ ಪೀಠದ ಎದುರು ನಡೆಯುವ ಸಾಂವಿಧಾನಿಕ ಪ್ರಾಮುಖ್ಯ ಮತ್ತು ರಾಷ್ಟ್ರೀಯ ಮಹತ್ವ ಹೊಂದಿರುವ ಹಾಗೂ ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ವಿಚಾರಣೆಗಳ ಪ್ರಸಾರಕ್ಕೆ ಒಪ್ಪಿಗೆ ನೀಡಿದೆ. ಕೌಟುಂಬಿಕ, ವೈವಾಹಿಕ ವ್ಯಾಜ್ಯ ಅಥವಾ ಲೈಂಗಿಕ ದೌರ್ಜನ್ಯ, ಅತ್ಯಾಚಾರದಂತಹ ಸೂಕ್ಷ್ಮ ಪ್ರಕರಣಗಳ ವಿಚಾರಣೆಯ ನೇರ ಪ್ರಸಾರ ಮಾಡದಂತೆ ಷರತ್ತು ವಿಧಿಸಿದೆ.
‘ಎಲ್ಲದಕ್ಕೂ ಮಿಗಿಲಾಗಿ ಸೂರ್ಯನ ಕಿರಣಗಳು ಉತ್ತಮ ನೈಸರ್ಗಿಕ ಸೋಂಕು ನಿವಾರಕ (ಕ್ರಿಮಿನಾಶಕ)’ ಎಂದು ನ್ಯಾಯಮೂರ್ತಿ ಡಿ.ವೈ, ಚಂದ್ರಚೂಡ್ ಅವರು ನ್ಯಾಯಾಂಗ ಪ್ರಕ್ರಿಯೆಯನ್ನು ಸಾರ್ವಜನಿಕರಿಗೆ ಮುಕ್ತಗೊಳಿಸುವ ನಿರ್ಧಾರವನ್ನು ಬಣ್ಣಿಸಿದ್ದಾರೆ.
ನ್ಯಾಯಾಲಯದ ನಾಲ್ಕು ಗೋಡೆಗಳ ಮಧ್ಯೆ ನಡೆಯುವ ಕಲಾಪ ಹೇಗೆ ನಡೆಯುತ್ತವೆ ಎಂದು ತಿಳಿದುಕೊಳ್ಳುವ ಹಕ್ಕು ಜನರಿಗಿದೆ ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.