ಅಮರ್ತ್ಯ ಸೇನ್
ಕೋಲ್ಕತ್ತ: ಹಿಂದೂ ಹಾಗೂ ಮುಸ್ಲಿಮರು ಸಾಮರಸ್ಯದಿಂದ ಜೊತೆಯಾಗಿ ಬದುಕುವ ಸಂಪ್ರದಾಯ ಭಾರತದ್ದು ಎಂದು ನೊಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಹೇಳಿದ್ದಾರೆ.
ಸೇನ್ ಅವರು ಅಲಿಪೋರ ಕಾರಾಗೃಹ ವಸ್ತುಸಂಗ್ರಹಾಲಯದಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
'ದೇಶದ ಇತಿಹಾಸವನ್ನು ಗಮನಿಸಿದರೆ, ಹಿಂದೂಗಳು ಮತ್ತು ಮುಸ್ಲಿಮರು ತಲೆಮಾರುಗಳಿಂದ ಒಟ್ಟಾಗಿ, ಸಾಮರಸ್ಯದಿಂದ ಕಾರ್ಯನಿರ್ವಹಿಸುತ್ತಾ ಬಂದಿರುವುದು ತಿಳಿಯುತ್ತದೆ. ಕ್ಷಿತಿಮೋಹನ್ ಸೇನ್ ಅವರು ತಮ್ಮ ಪುಸ್ತಕದಲ್ಲಿ ಒತ್ತಿಹೇಳಿದ್ದ 'ಜುಕ್ಟೊಸಾಧನ' (ಐಕ್ಯತೆಯ ಮಂತ್ರ) ಎಂದರೆ ಇದೇ ಆಗಿದೆ. ಈ 'ಜುಕ್ಟೊಸಾಧನ'ವನ್ನು ಈಗಿನ ಕಾಲಘಟ್ಟದಲ್ಲಿ ಅಳವಡಿಸಿಕೊಳ್ಳಬೇಕಿದೆ' ಎಂದು ಪ್ರತಿಪಾದಿಸಿದ್ದಾರೆ.
'ಧಾರ್ಮಿಕ ಸಹಿಷ್ಣುತೆಯು ಮತ್ತೊಂದು ಸಮುದಾಯದವರಿಗೂ ಬದುಕಲು ಅವಕಾಶ ಕಲ್ಪಿಸುತ್ತದೆ. ಕೋಮು ಸೌಹಾರ್ದಕ್ಕೆ ಧಕ್ಕೆಯಾಗುತ್ತಿರುವ ಸದ್ಯದ ಸ್ಥಿತಿಯಲ್ಲಿ ಜುಕ್ಟೊಸಾಧನ ರೂಢಿಸಿಕೊಳ್ಳುವುದು ಅತ್ಯಗತ್ಯವಾಗಿದೆ. ಆದರೆ, ಪರಸ್ಪರ ಒಟ್ಟಿಗೆ ಕೆಲಸ ಮಾಡುವುದು ನಿರ್ಣಾಯಕವಾಗಲಿದೆ' ಎಂದು ಒತ್ತಿಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.