ಹಾಲಿನ ಕ್ಯಾನ್ ಮುಚ್ಚಳ ತಲೆಗಿಟ್ಟುಕೊಂಡ ವ್ಯಕ್ತಿ
ಇಂದೋರ್: ಮಧ್ಯಪ್ರದೇಶದ ಇಂದೋರ್ನಲ್ಲಿ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸದಿದ್ದರೆ ಅವರ ವಾಹನಗಳಿಗೆ ಪೆಟ್ರೋಲ್ ಬಂಕ್ನಲ್ಲಿ ಇಂಧನ ಹಾಕುವಂತಿಲ್ಲ ಎಂಬ ಜಾರಿಗೆ ತರಲಾಗಿದೆ. ಹೀಗಿರುವಾಗ ದ್ವಿಚಕ್ರ ವಾಹನದಲ್ಲಿ ಬಂದ ವ್ಯಕ್ತಿಯೊಬ್ಬರು ಹಾಲಿನ ಕ್ಯಾನ್ನ ಮುಚ್ಚಳವನ್ನು ಹೆಲ್ಮೆಟ್ ರೀತಿ ಧರಿಸಿ ಪೆಟ್ರೋಲ್ ಬಂಕ್ ಪ್ರವೇಶಿಸಿದ್ದಾರೆ.
ಇದರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
ವಿಡಿಯೊದಲ್ಲಿ, ಹಾಲಿನ ಕ್ಯಾನ್ಗಳನ್ನು ಬೈಕ್ಗೆ ಕಟ್ಟಿಕೊಂಡಿರುವ ವ್ಯಕ್ತಿ, ಅದೇ ಕ್ಯಾನ್ನ ಮುಚ್ಚಳವನ್ನು ತೆಗೆದು ಹೆಲ್ಮೆಟ್ನಂತೆ ತಲೆಗೆ ಇಟ್ಟುಕೊಂಡಿದ್ದಾರೆ. ಪೆಟ್ರೋಲ್ ಬಂಕ್ನಲ್ಲಿದ್ದ ಯುವತಿ ಅದನ್ನು ಲೆಕ್ಕಿಸದೆ ಪೆಟ್ರೋಲ್ ತುಂಬಿಸಿದ ದೃಶ್ಯ ವಿಡಿಯೊದಲ್ಲಿದೆ.
ವಿಡಿಯೊ ಹರಿದಾಡುತ್ತಿದ್ದಂತೆ ತರಹೇವಾರಿ ಮೀಮ್ಸ್, ಸಂದೇಶಗಳು ಬಂದಿವೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಡಳಿತ ಘಟನೆಯ ಸತ್ಯಾಸತ್ಯತೆಯನ್ನು ಪರಿಶೀಲನೆ ನಡೆಸಿದೆ. ಘಟನೆ ನಡೆದಿದ್ದು ನಿಜ ಎಂದು ತಿಳಿದಿದ್ದು, ನಿಯಮ ಉಲ್ಲಂಘಿಸಿದ ಪೆಟ್ರೋಲ್ ಬಂಕ್ಅನ್ನು ಮೊಹರು ಮಾಡಲಾಗಿದೆ ಎಂದು ಅಲ್ಲಿಯ ತಹಶಿಲ್ದಾರ್ ಪಿಟಿಐಗೆ ಮಾಹಿತಿ ನೀಡಿದ್ದಾರೆ.
ನಗರದಲ್ಲಿ ಸೀಟ್ ಬೆಲ್ಟ್ ಹಾಗೂ ಹೆಲ್ಮೆಟ್ ಸೇರಿದಂತೆ ರಸ್ತೆ ಸುರಕ್ಷತಾ ಕ್ರಮಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಕೈಗೊಳ್ಳುವಂತೆ ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಹಾಗೂ ರಸ್ತೆ ಸುರಕ್ಷತೆ ಸಮಿತಿಯ ಅಧ್ಯಕ್ಷ ಅಭಯ್ ಮನೋಹರ್ ಅವರು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದರು.
ಈ ಕುರಿತು ಇಂದೋರ್ ಜಿಲ್ಲಾಡಳಿತವು ಕಠಿಣ ಕ್ರಮಕ್ಕೆ ಮುಂದಾಗಿದೆ. ರಸ್ತೆ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸುವವರಿಗೆ ಒಂದು ವರ್ಷ ಜೈಲು ಅಥವಾ ₹5,000 ದಂಡ ಹಾಗೂ ಎರಡೂ ಕ್ರಮಗಳನ್ನು ಕೂಡ ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.