ಪ್ರಧಾನಿ ನರೇಂದ್ರ ಮೋದಿ ಹಾಗೂ ಕಾಂಗ್ರೆಸ್ ಧ್ವಜ
ನವದೆಹಲಿ: ದೇಶದಲ್ಲಿ ಹಣದುಬ್ಬರವು ಬುಲೆಟ್ ರೈಲಿಗಿಂತ ವೇಗವಾಗಿ ಏರಿಕೆ ಕಾಣುತ್ತಿದ್ದು, ಇದರಿಂದ ಜನರ ಜೀವನದ ಮೇಲೆ ಗಂಭೀರ ಪರಿಣಾಮ ಬೀರಿದೆ ಎಂದು ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಸೋಮವಾರ ವಾಗ್ದಾಳಿ ನಡೆಸಿದೆ.
ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಆಹಾರ ಪದಾರ್ಥಗಳ ಬೆಲೆ ದಿನೇ ದಿನೇ ಏರಿಕೆ ಕಾಣುತ್ತಿದೆ. ತಾವು ಘೋಷಿಸಿರುವ ಬುಲೆಟ್ ರೈಲು ಇನ್ನೂ ಬಂದಿಲ್ಲ. ಆದರೆ ಅವುಗಳ (ರೈಲು) ವೇಗಕ್ಕಿಂತ ಹಣದುಬ್ಬರದ ವೇಗವೇ ಮುನ್ನುಗ್ಗುತ್ತಿದೆ ಎಂದು ಕಿಡಿಕಾರಿದ್ದಾರೆ.
‘ದಿನದಿಂದ ದಿನಕ್ಕೆ ಅಗತ್ಯ ವಸ್ತುಗಳ ದರಗಳು ಹೆಚ್ಚಾಗುತ್ತಿದ್ದು, ಕಳೆದ ಒಂದು ವರ್ಷದಲ್ಲಿ ವಿವಿಧ ಹಿಟ್ಟಿನ ದರಗಳು, ಎಣ್ಣೆ, ಹಾಲು, ಸಾಂಬಾರು ಪದಾರ್ಥಗಳು ಸೇರಿದಂತೆ ಹಣ್ಣುಗಳ ಬೆಲೆಯು ಒಂದೂವರೆಯಿಂದ ಎರಡು ಪಟ್ಟು ಹೆಚ್ಚಾಗಿದೆ. ದಿನನಿತ್ಯದ ವಸ್ತುಗಳು ಸಾಮಾನ್ಯ ಜನರ ಕೈಗೆಟುಕುತ್ತಿಲ್ಲ. ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಎಲ್ಲವೂ ದುಬಾರಿಯಾಗಿದೆ. ಜನರಿಗೆ ದಿನನಿತ್ಯದ ವಸ್ತುಗಳು ಕೂಡ ಕನಸ್ಸಿನಂತೆ ಮಾರ್ಪಟಿದೆ ಎಂದು ಕುಟುಕಿದ್ದಾರೆ.
ಮೋದಿ ಸರ್ಕಾರದಲ್ಲಿ ಒಳ್ಳೆಯ ದಿನಗಳು (ಅಚ್ಛೇ ದಿನ್) ಬರುತ್ತವೆ ಎಂದು ತಮ್ಮ ಭಾಷಣಗಳಲ್ಲಿ ಭರವಸೆ ನೀಡುತ್ತೀರಿ. ಅಚ್ಛೇ ದಿನ್ ಅಂದರೆ ಇವೆಯೇ? ಎಂದು ವಾಗ್ದಾಳಿ ನಡೆಸಿರುವ ರಮೇಶ್, ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆ ಮತ್ತು ಬೆಲೆ ಏರಿಕೆಯ ಕುರಿತು ಕಳವಳ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.