
ಪ್ರಧಾನಿ ನರೇಂದ್ರ ಮೋದಿ
-ಪಿಟಿಐ ಚಿತ್ರ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಸಭಾ ಸಭಾಪತಿ ಮತ್ತು ಭಾರತದ ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರಿಗೆ ದೂರವಾಣಿ ಕರೆ ಮಾಡಿದ್ದು, ಅಮಾನತುಗೊಂಡಿರುವ ಕೆಲ ಸಂಸದರು ಧನಕರ್ ಅವರ ಅಧ್ಯಕ್ಷತೆಯ ಶೈಲಿಯನ್ನು ಅಣಕಿಸಿದ ಮತ್ತು ಅವರ ಕಚೇರಿಗೆ ಅಗೌರವ ತೋರಿದ ವರ್ತನೆ ಬಗ್ಗೆ ನೋವು ವ್ಯಕ್ತಪಡಿಸಿದ್ದಾರೆ.
ಈ ಮಾಹಿತಿಯನ್ನು ಬುಧವಾರ ಧನಕರ್ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿ ಜೀ ಅವರು ನನಗೆ ದೂರವಾಣಿ ಕರೆ ಮಾಡಿದ್ದರು. ‘ನಿನ್ನೆ ಪವಿತ್ರ ಸಂಸತ್ತಿನ ಸಂಕೀರ್ಣದಲ್ಲಿ ಕೆಲವು ಸಂಸದರ ಹೀನಾಯ ನಡವಳಿಕೆಯ ಬಗ್ಗೆ ತೀವ್ರ ನೋವನ್ನು ವ್ಯಕ್ತಪಡಿಸಿದರು’ ಎಂದು ತಿಳಿಸಿದ್ದಾರೆ.
ತಮಗಾಗಿದ್ದ ಕಹಿ ಅನುಭವವನ್ನೂ ಪ್ರಧಾನಿ ಹಂಚಿಕೊಂಡರು ಎಂದು ಧನಕರ್ ಹೇಳಿದ್ದಾರೆ.
‘ತಾನೂ ಸಹ ಇಪ್ಪತ್ತು ವರ್ಷಗಳಿಂದ ಇಂತಹ ಅವಮಾನಗಳನ್ನು ಎದುರಿಸುತ್ತಿದ್ದೇನೆ. ಆದರೆ, ಭಾರತದ ಉಪರಾಷ್ಟ್ರಪತಿಯಂತಹ ಸಾಂವಿಧಾನಿಕ ಕಚೇರಿಗೆ ಅದರಲ್ಲೂ ಸಂಸತ್ತಿನ ಆವರಣದಲ್ಲಿ ಅವಮಾನ ಆಗಿರುವುದು ಅತ್ಯಂತ ದುರದೃಷ್ಟಕರ’ ಎಂದು ಪ್ರಧಾನಿ ಹೇಳಿರುವುದಾಗಿ ಧನಕರ್ ಪೋಸ್ಟ್ ಮಾಡಿದ್ದಾರೆ.
‘ನನ್ನನ್ನು ನನ್ನ ಕರ್ತವ್ಯ ಪಾಲನೆ ಮತ್ತು ಸಂವಿಧಾನದ ತತ್ವಗಳನ್ನು ಎತ್ತಿಹಿಡಿಯುವ ನನ್ನ ಬದ್ಧತೆಯನ್ನು ಈ ರೀತಿಯ ವರ್ತನೆಗಳಿಂದ ತಡೆಯಲಾಗುವುದಿಲ್ಲ. ನಾನು ನನ್ನ ಹೃದಯದಾಳದಿಂದ ಆ ಮೌಲ್ಯಗಳಿಗೆ ಬದ್ಧನಾಗಿದ್ದೇನೆ. ಯಾವುದೇ ಅವಮಾನಗಳು ನನ್ನ ಹಾದಿಯನ್ನು ಬದಲಾಯಿಸುವುದಿಲ್ಲ ಎಂದು ಮೋದಿಗೆ ತಿಳಿಸಿದೆ’ ಎಂದು ಧನಕರ್ ಹೇಳಿದ್ದಾರೆ.
ಸಂಸದರ ಅಮಾನತು ಖಂಡಿಸಿ ವಿಪಕ್ಷಗಳು ಮಂಗಳವಾರ ನಡೆಸುತ್ತಿದ್ದ ಪ್ರತಿಭಟನೆ ವೇಳೆ ತೃಣಮೂಲ ಕಾಂಗ್ರೆಸ್ ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು, ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರ ಸದನದ ಕಾರ್ಯವೈಖರಿಯನ್ನು ಅಣಕಿಸಿದ್ದರು. ಈ ವಿಡಿಯೊ ಎಲ್ಲೆಡೆ ಹರದಾಡಿ ಆಕ್ರೋಶ ವ್ಯಕ್ತವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.