ಚಿತ್ರ: ಎಐ
ಭ್ರಷ್ಟಾಚಾರ ರಾಷ್ಟ್ರದ ಪ್ರಗತಿಗೆ ಮಾರಕ ಎಂಬ ಮಾತಿದೆ. ಆದರೆ ಅದರ ನಿರ್ಮೂಲನೆ ಮಾತ್ರ ಇಂದಿಗೂ ಸಾಧ್ಯವಾಗದಿರುವುದು ವಿಪರ್ಯಾಸ. ‘ಅಧಿಕಾರದಲ್ಲಿರುವವರು ನಿಯಮಗಳನ್ನು ಮೀರಿ ವೈಯಕ್ತಿಕ ಲಾಭಕ್ಕಾಗಿ ತಮ್ಮ ಅಧಿಕಾರವನ್ನು ದುರುಪಯೋಗ ಮಾಡಿಕೊಳ್ಳುವ ಮೂಲಕ ಹಣ ಸಂಪಾದಿಸುವುದೆ ಭ್ರಷ್ಟಾಚಾರ’.
ಭ್ರಷ್ಟಾಚಾರ ಲಂಚ, ಸುಲಿಗೆ, ವಂಚನೆ, ಅಧಿಕಾರದ ದುರುಪಯೋಗ, ಮನಿ ಲಾಂಡರಿಂಗ್ ಅಥವಾ ಸ್ವಜನಪಕ್ಷಪಾತದ ಸ್ವರೂಪದ್ದಾಗಿರಬಹುದು. ಸಾಮಾಜಿಕ ಪಿಡುಗಾಗಿರುವ ಭ್ರಷ್ಟಾಚಾರ ನಿಲ್ಲಿಸುವುದು ಮತ್ತು ಅದರ ಬಗ್ಗೆ ಜನರಿಗೆ ಅರಿವು ಮೂಡಿಸುವ ಉದ್ದೇಶದಿಂದ ಡಿಸೆಂಬರ್ 9ನ್ನು ಅಂತಾರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಿನವನ್ನಾಗಿ ಆಚರಿಸಲಾಗುತ್ತದೆ.
ಭ್ರಷ್ಟಾಚಾರದಿಂದ ದೇಶದ ಆರ್ಥಿಕತೆಯ ಮೇಲೂ ಪ್ರಭಾವ ಬೀರುತ್ತದೆ. ಅಲ್ಲದೇ ಸಾರ್ವಜನಿಕರಿಗೆ ತಲುಪಬೇಕಾದ ಸವಲತ್ತುಗಳ ಕೊರತೆ ಉಂಟಾಗುತ್ತದೆ. ಇಂದು ದೇಶದಲ್ಲಿ ಭ್ರಷ್ಟಾಚಾರ ನಿಯಂತ್ರಿಸಲು ಲೋಕಪಾಲ, ಆರ್ಟಿಐ ಸೇರಿದಂತೆ ಇತರೆ ಕಾನೂನುಗಳು ಜಾರಿಯಲ್ಲಿದ್ದರೂ ಇಂದಿಗೂ ಸಂಪೂರ್ಣವಾಗಿ ಭ್ರಷ್ಟಾಚಾರದ ನಿರ್ಮೂಲನೆಯಾಗಿಲ್ಲ.
ಈ ದಿನದ ಇತಿಹಾಸ:
ಭ್ರಷ್ಟಾಚಾರವನ್ನು ವಿಶ್ವದ ಬಹುತೇಕ ರಾಷ್ಟಗಳು ಎದುರಿಸುತ್ತಿರುವ ಪಿಡುಗಾಗಿದೆ. ದೇಶಗಳ ಆರ್ಥಿಕ ಸ್ಥಿತಿಯ ಲೋಪಕ್ಕೆ ಇದರ ಕೊಡುಗೆ ಅಪಾರ. ಈ ಹಿನ್ನಲೆಯಲ್ಲಿ ಭ್ರಷ್ಟಾಚಾರವನ್ನು ತಡೆಗಟ್ಟುವುದರ ಜೊತೆಗೆ ಜನರಿಗೆ ಇದರ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆ 2003ರ ಅಕ್ಟೋಬರ್ 31 ರಂದು ಅಂತಾರಾಷ್ಟ್ರೀಯ ಭ್ರಷ್ಟಾಚಾರ ದಿನವನ್ನಾಗಿ ಅಂಗೀಕಾರ ಮಾಡಿತು. ಬಳಿಕ ಭ್ರಷ್ಟಾಚಾರ ಕುರಿತು ವಿಶೇಷ ಜಾಗೃತಿ ಮೂಡಿಸುವ ಸಲುವಾಗಿ, ಡಿಸೆಂಬರ್ 9ರಂದು ಭ್ರಷ್ಟಾಚಾರ ಜಾಗೃತಿ ದಿನವಾಗಿ ಆಚರಣೆ ಮಾಡಲಾಗುತ್ತದೆ.
ಅಂತರರಾಷ್ಟ್ರೀಯ ಭ್ರಷ್ಟಾಚಾರ ದಿನದ ಮಹತ್ವ:
ಭ್ರಷ್ಟಾಚಾರದ ಕುರಿತು ಪ್ರತಿಯೊಬ್ಬರಲ್ಲಿಯೂ ಜಾಗೃತಿ ಮೂಡಿಸುವುದು.
ಭ್ರಷ್ಟಾಚಾರ ಮುಕ್ತ ವಾತಾವರಣವನ್ನು ಕಾಪಾಡಿಕೊಳ್ಳುವಲ್ಲಿ ಸಾರ್ವಜನಿಕರ ಪಾತ್ರವೇನು ಎಂಬ ಅರಿವು ಮೂಡಿಸುವುದು.
ಭ್ರಷ್ಟಾಚಾರದ ವಿರುದ್ಧ ಹೋರಾಡಲು ವಿಶ್ವದ ಎಲ್ಲಾ ಸರ್ಕಾರಗಳು ಕಠಿಣ ಕಾನೂನು ಮತ್ತು ನೀತಿಗಳನ್ನು ಜಾರಿಗೆ ತರುವುದು.
ಭವಿಷ್ಯದ ಭ್ರಷ್ಟಾಚಾರದ ನಿಯಂತ್ರಣ ಕುರಿತು ಯುವಕರಿಗೆ ಜಾಗೃತಿ ಮತ್ತು ಅರಿವು ಮೂಡಿಸುವುದು.
2025ರ ಥೀಮ್:
‘ಭ್ರಷ್ಟಾಚಾರದ ವಿರುದ್ಧ ಯುವಕರನ್ನು ಒಗ್ಗೂಡುವುದು: ನಾಳೆಯ ಸಮಗ್ರತೆಯನ್ನು ಕಾಪಾಡುವುದು’.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.