ನವದೆಹಲಿ: ಐಎನ್ಎಕ್ಸ್ ಮಿಡಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಪರಿಶೀಲಿಸಲು ಆರೋಪಿಗಳಾದ ಕಾಂಗ್ರೆಸ್ ನಾಯಕ ಪಿ.ಚಿದಂಬರಂ, ಅವರ ಪುತ್ರ ಕಾರ್ತಿ ಚಿದಂಬರಂ ಮತ್ತು ಇತರರಿಗೆ ವಿಚಾರಣಾ ನ್ಯಾಯಾಲಯ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಸಿಬಿಐ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಬುಧವಾರ ವಜಾ ಮಾಡಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮಲ್ಖಾನಾದಲ್ಲಿ ಇರಿಸಿರುವ ದಾಖಲೆಗಳನ್ನು ಆರೋಪಿಗಳು ಅಥವಾ ಅವರ ಪರ ವಕೀಲರು ಪರಿಶೀಲಿಸಲು ಅವಕಾಶ ನೀಡಿ ನ್ಯಾಯಾಧೀಶರು ಮಾರ್ಚ್ 5 ರಂದು ನೀಡಿರುವ ಆದೇಶವನ್ನು ರದ್ದುಗೊಳಿಸುವಂತೆ ಸಿಬಿಐ ಕೋರಿತ್ತು. ಆದರೆ, ಸಿಬಿಐ ಅರ್ಜಿಯನ್ನು ನ್ಯಾಯಮೂರ್ತಿ ಮುಕ್ತಾ ಗುಪ್ತಾ ವಜಾಗೊಳಿಸಿದರು.
ಐಎನ್ಎಕ್ಸ್ ಮೀಡಿಯಾ ಪ್ರಕರಣದ ವಿಚಾರಣೆ ಇನ್ನೂ ನಡೆಯುತ್ತಿರುವುದರಿಂದ ಆರೋಪಿಯಾಗಿರುವ ಪಿ.ಚಿದಂಬರಂ ಅವರಿಗೆ ದಾಖಲೆಗಳ ಪರಿಶೀಲನೆಗೆ ಅನುಮತಿ ನೀಡಿರುವುದನ್ನು ಸಿಬಿಐ ವಿರೋಧಿಸಿತ್ತು. ಇದು ಸಾಕ್ಷ್ಯ ನಾಶಕ್ಕೆ ಕಾರಣವಾಗಬಹುದು ಎಂದು ವಾದಿಸಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.