ಮುಂಬೈ (ಪಿಟಿಐ): ಪಶ್ಚಿಮ ರೈಲ್ವೆ ನಿಲ್ದಾಣಗಳಲ್ಲಿ ಹದಿನೈದು ದಿನಗಳಿಂದ ಸ್ವಚ್ಛ ಭಾರತ ಅಭಿಯಾನ ಕೈಗೊಳ್ಳಲಾಗಿದ್ದು, ಒಟ್ಟು 109 ಟನ್ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸಲಾಗಿದೆ ಎಂದು ಪಶ್ಚಿಮ ರೈಲ್ವೆ ಮೂಲಗಳು ಮಂಗಳವಾರ ತಿಳಿಸಿವೆ.
ರಾಷ್ಟ್ರದಾದ್ಯಂತ ಸ್ವಚ್ಛ ಭಾರತ ಅಭಿಯಾನ ಕೈಗೊಳ್ಳಲಾಗಿದ್ದು, ಕೇಂದ್ರ ರೈಲ್ವೆ ಮತ್ತು ಪಶ್ಚಿಮ ರೈಲ್ವೆ ನಿಗಮ ಜಂಟಿಯಾಗಿ ಸೆ. 16ರಿಂದ ತಮ್ಮ ವ್ಯಾಪ್ತಿಯ ವಿವಿಧ ರೈಲ್ವೆ ನಿಲ್ದಾಣಗಳಲ್ಲಿ ಅಭಿಯಾನ ಕೈಗೊಂಡಿದ್ದವು.
‘ಅಭಿಯಾನದಡಿ ವಿವಿಧ ನಿಲ್ದಾಣಗಳಿಂದ ಒಟ್ಟು 109 ಟನ್ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸಲಾಗಿದೆ. ಒಟ್ಟು 3, 926 ಪ್ರಯಾಣಿಕರಿಗೆ ದಂಡ ವಿಧಿಸಲಾಗಿದ್ದು, ₹ 7,59,780 ಹಣ ಸಂಗ್ರಹಿಸಲಾಗಿದೆ’ ಎಂದು ಪಶ್ಚಿಮ ರೈಲ್ವೆ ತಿಳಿಸಿದೆ.
15 ನಿಲ್ದಾಣಗಳಲ್ಲಿ 15,831 ಮರಗಳನ್ನು ನೆಡಲಾಗಿದೆ. ಸ್ವಚ್ಛತೆ ಮತ್ತು ಪ್ಲಾಸ್ಟಿಕ್ ಬ್ಯಾನ್ ಮಾಡಿರುವ ಕುರಿತು ಜಾಗೃತಿ ಮೂಡಿಸಲು 4,535 ಪೋಸ್ಟರ್, ಬ್ಯಾನರ್ಗಳನ್ನು ಬಳಸಲಾಗಿದೆ. ಸ್ವಯಂ ಸೇವಾ ಸಂಸ್ಥೆಗಳು, ಸ್ವಸಹಾಯ ಗುಂಪುಗಳು ಮತ್ತು ಸ್ಥಳೀಯ ಸಂಘಸಂಸ್ಥೆಗಳು 1,264 ಕಸದ ತೊಟ್ಟಿಗಳನ್ನು ದೇಣಿಯಾಗಿ ನೀಡಿವೆ.
ಸುಮಾರು 10.16 ಲಕ್ಷ ಮಂದಿ ಸ್ವಚ್ಛತೆ, ಗಿಡ ನೆಡುವಿಕೆ ಮತ್ತು ಜಾಗೃತಿ ಅಭಿಯಾನದಲ್ಲಿ ಪಾಲ್ಗೊಂಡಿದ್ದರು ಎಂದು ಕೇಂದ್ರ ರೈಲ್ವೆ ಮಾಹಿತಿ ನೀಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.