ನವದೆಹಲಿ: ‘ದಲಿತರು, ಆದಿವಾಸಿಗಳು, ರೈತರು ಮತ್ತು ಕಾರ್ಮಿಕರ ಪರ ಕೆಲಸ ಮಾಡುವುದು ದೇಶದ್ರೋಹ ಎನಿಸುವುದೇ’ ಎಂದು ಪ್ರಶ್ನಿಸುವ ಮೂಲಕ ಸಾಮಾಜಿಕ ಹೋರಾಟಗಾರ್ತಿ ಮೇಧಾ ಪಾಟ್ಕರ್ ಅವರು ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.
ಭೂಸ್ವಾಧೀನ ಕಾನೂನಿನ ಅನುಷ್ಠಾನದ ಕುರಿತು ಪರಿಶೀಲಿಸುತ್ತಿದ್ದ ಸಂಸದೀಯ ಸಮಿತಿ ಸಭೆಗೆ ಬಹುಭಾಷಾ ನಟ ಪ್ರಕಾಶ್ ರಾಜ್ ಹಾಗೂ ಮೇಧಾ ಪಾಟ್ಕರ್ ಅವರನ್ನು ಕರೆಸಿದ್ದಕ್ಕೆ ಬಿಜೆಪಿ ಸಂಸದರು ಆಕ್ಷೇಪ ವ್ಯಕ್ತಪಡಿಸಿ ಹೊರನಡೆದಿದ್ದರು. ಮಂಗಳವಾರ ಇಲ್ಲಿ ನಡೆಯಬೇಕಿದ್ದ ಸಭೆ ದಿಢೀರ್ ಆಗಿ ರದ್ದಾಗಿತ್ತು. ಸಭೆಯಿಂದ ಹೊರನಡೆಯುವಾಗ ಬಿಜೆಪಿಯ ಕೆಲವು ಸದಸ್ಯರು ಮೇಧಾ ಅವರನ್ನು ‘ರಾಷ್ಟ್ರ ವಿರೋಧಿ’ ಎಂದು ಕರೆದಿದ್ದರು.
ಬುಧವಾರ ಈ ಬಗ್ಗೆ ಪ್ರತಿಕ್ರಿಯಿಸಿದ ಮೇಧಾ, ‘ರಾಷ್ಟ್ರವಿರೋಧಿ ಎಂಬ ಆರೋಪದ ಅರ್ಥವೇನು? ದಲಿತರು, ಆದಿವಾಸಿಗಳು ಮತ್ತು ರೈತರ ಹಕ್ಕುಗಳನ್ನು ಕಾನೂನು ಹಾಗೂ ಸಂವಿಧಾನದ ಅಡಿಯಲ್ಲಿ ರಕ್ಷಿಸಲು ಹೋರಾಡುವುದು ದೇಶದ್ರೋಹವೆ?’ ಎಂದು ಕಿಡಿಕಾರಿದ್ದಾರೆ.
‘ನಾವು ಹೇಳಿದ್ದರಲ್ಲಿ ಏನಾದರೂ ತಪ್ಪು ಇದ್ದರೆ ಅದನ್ನು ವಿರೋಧಿಸಲಿ. ಆದರೆ, ನಮ್ಮನ್ನು ‘ರಾಷ್ಟ್ರ ವಿರೋಧಿ’ ಅಥವಾ ‘ನಗರ ನಕ್ಸಲರು’ ಎಂದು ಕರೆಯುವ ಅಧಿಕಾರ ಅವರಿಗಿಲ್ಲ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.