ADVERTISEMENT

ಮಾನಸಿಕ ಆರೋಗ್ಯದ ಬಗ್ಗೆ ಮುಕ್ತ ಧ್ವನಿ ಸಕಾರಾತ್ಮಕ ಬೆಳವಣಿಗೆ: ಆ್ಯಂಡರ್ಸನ್‌

ಪಿಟಿಐ
Published 3 ಆಗಸ್ಟ್ 2021, 7:27 IST
Last Updated 3 ಆಗಸ್ಟ್ 2021, 7:27 IST
ಜೇಮ್ಸ್ ಆ್ಯಂಡರ್ಸನ್‌
ಜೇಮ್ಸ್ ಆ್ಯಂಡರ್ಸನ್‌   

ನಾಟಿಂಗ್‌ಹ್ಯಾಮ್‌: ಕ್ರೀಡಾಪಟುಗಳು ಇತ್ತೀಚಿನ ವರ್ಷಗಳಲ್ಲಿ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಮುಕ್ತವಾಗಿ ಮಾತನಾಡುತ್ತಿರುವುದು ಸಕಾರಾತ್ಮಕ ಬೆಳವಣಿಗೆ ಎಂದು ಇಂಗ್ಲೆಂಡ್‌ ಕ್ರಿಕೆಟ್‌ ತಂಡದ ವೇಗದ ಬೌಲರ್‌ ಜೇಮ್ಸ್‌ ಆ್ಯಂಡರ್ಸನ್‌ ಅಭಿಪ್ರಾಯಪಟ್ಟಿದ್ದಾರೆ.

ಕೋವಿಡ್ ಪಿಡುಗಿನ ವೇಳೆ ಕ್ರಿಕೆಟ್‌ ಪುನರಾರಂಭವಾದ ಸೋಂಕು ತಡೆಗೆ ಅಳವಡಿಸುವ ಬಬಲ್‌ನಿಂದ ಬಬಲ್‌ಗೆ ಹೋಗಿ ಸುಸ್ತಾಗಿರುವ ಆ್ಯಂಡರ್ಸನ್‌ ಸೋಮವಾರ ಈ ಹೇಳಿಕೆ ನೀಡಿದ್ದಾರೆ.

ಮಾನಸಿಕ ಸ್ವಾಸ್ಥ್ಯದ ಕಾರಣ ನೀಡಿ ಜಪಾನ್‌ ಆಟಗಾರ್ತಿ ನವೊಮಿ ಒಸಾಕಾ ಅವರು ಎರಡು ತಿಂಗಳ ಕೆಳಗೆ ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿಯಿಂದ ಅರ್ಧದಲ್ಲೇ ಹಿಂದೆ ಸರಿದಿದ್ದರು. ಅಮೆರಿಕದ ಅಗ್ರಮಾನ್ಯ ಮಹಿಳಾ ಜಿಮ್ನಾಸ್ಟ್‌ ಸಿಮೊನಾ ಬಿಲ್ಸ್‌ ಅವರೂ ಮಾನಸಿಕ ಸುಸ್ತಿನ ಕಾರಣ ನೀಡಿ ಟೋಕಿಯೊ ಒಲಿಂಪಿಕ್ಸ್‌ನ ಆರು ಸ್ಪರ್ಧೆಗಳಲ್ಲಿ ಐದರಿಂದ ಹಿಂದೆ ಸರಿದಿದ್ದರು. ಇಂಗ್ಲೆಂಡ್‌ನ ಸ್ಟಾರ್‌ ಆಟಗಾರ ಬೆನ್‌ ಸ್ಟೋಕ್ಸ್‌ ಅವರೂ ಕ್ರಿಕೆಟ್‌ನಿಂದ ಅನಿರ್ದಿಷ್ಟಾವಧಿಗೆ ವಿರಾಮ ತೆಗೆದುಕೊಂಡಿದ್ದಾರೆ.

ADVERTISEMENT

‘ಈ ವಿಷಯ ವ್ಯಕ್ತಿಗಳ ಮೇಲೆ ಬೇರೆ ಬೇರೆ ರೀತಿ ಪರಿಣಾಮ ಬೀರುತ್ತದೆ ಎಂಬುದು ನನ್ನ ಭಾವನೆ. ಆಯಾ ಕ್ರೀಡೆಗಳಲ್ಲಿ ಯಶಸ್ಸು ಸಾಧಿಸಿದವರಿಗೆ ಒತ್ತಡದ ತೀವ್ರತೆ ಭಿನ್ನವಾಗಿರುತ್ತದೆ’ ಎಂದಿದ್ದಾರೆ ಅನುಭವಿ ವೇಗಿ ಆ್ಯಂಡರ್ಸನ್‌. 162 ಟೆಸ್ಟ್‌ ಪಂದ್ಯಗಳನ್ನಾಡಿರುವ ‘ಜಿಮ್ಮಿ’ ಆ್ಯಂಡರ್ಸನ್‌ 617 ವಿಕೆಟ್‌ಗಳನ್ನು ಪಡೆದಿದ್ದು ಅತಿ ಹೆಚ್ಚು ವಿಕೆಟ್‌ ಪಡೆದಿರುವ ವೇಗಿ ಎನಿಸಿದ್ದಾರೆ.

‘ಬೆನ್‌ (ಸ್ಟೋಕ್ಸ್) ಬಗ್ಗೆ ಹೇಳುವುದಾದರೆ ಕೆಲವು ವರ್ಷಗಳಿಂದ ಅವರು ಜವಾಬ್ದಾರಿಯರಿತು ಆಡಿದ್ದಾರೆ. ಸಿಕ್ಕಾಪಟ್ಟೆ ಆಡಿದ್ದಾರೆ’ ಎಂದು ಮಾಧ್ಯಮದ ಜೊತೆಗೆ ‘ವರ್ಚುವಲ್‌ ಸಂವಾದ’ದ ವೇಳೆ ಅವರು ಅನಿಸಿಕೆ ವ್ಯಕ್ತಪಡಿಸಿದ್ದಾರೆ.

ಕೆಲವು ವರ್ಷಗಳಿಂದ ಕಾಣುತ್ತಿರುವ ಒಳ್ಳೆಯ ಬೆಳವಣಿಗೆ ಇದು. ಮಾನಸಿಕ ಆರೋಗ್ಯದ ಬಗ್ಗೆ, ಮನಸ್ಸಿನ ಭಾವನೆಗಳ ಬಗ್ಗೆ ಮತ್ತು ಎದುರಿಸುತ್ತಿರುವ ಮಾನಸಿಕ ಒತ್ತಡ, ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಮಾತನಾಡುವುದು ತಪ್ಪಲ್ಲವೇ ಅಲ್ಲ’ ಎಂದು ಅವರು ಹೇಳಿದ್ದಾರೆ.

2003ರಲ್ಲಿ ಆ್ಯಂಡರ್ಸನ್‌ ಅವರು ಟೆಸ್ಟ್‌ಗೆ ಪದಾರ್ಪಣೆ ಮಾಡಿದ್ದರು. ‘ಆಗಿನ ಕಾಲದಲ್ಲೆಲ್ಲಾ ಮಾನಸಿಕ ಒತ್ತಡದ ಬಗ್ಗೆ ಮಾತನಾಡಿದರೆ, ಅದನ್ನು ದೌರ್ಬಲ್ಯದ ಸಂಕೇತ ಎಂದು ಪರಿಗಣಿಸುತ್ತಿದ್ದರು’ ಎಂದು ಅವರು ತಿಳಿಸಿದ್ದಾರೆ.

‘ನಾನು ಕ್ರೀಡಾಕ್ಷೇತ್ರಕ್ಕೆ ಕಾಲಿಟ್ಟಾಗ, ವಿಶೇಷವಾಗಿ ‍ಪುರುಷ ಆಟಗಾರರು ಮಾನಸಿಕ ಬಳಲಿಕೆ ಬಗ್ಗೆ ಏನಾದರೂ ಮಾತನಾಡಿದ್ದರೆ ಅದನ್ನು ದೌರ್ಬಲ್ಯ ಎನ್ನುವಂತೆ ಕಾಣುತ್ತಿದ್ದರು. ಅದಕ್ಕೆ ಬೇರೆ ಬೇರೆ ಕಾರಣಗಳಿದ್ದಿರಬಹುದು’ ಎಂದು ವಿಶ್ಲೇಷಿಸಿದ್ದಾರೆ.

ಆ್ಯಂಡರ್ಸನ್‌ ಅವರು ಭಾರತ ವಿರುದ್ಧ ಟೆಸ್ಟ್‌ ಸರಣಿಯಲ್ಲಿ ವೇಗದ ದಾಳಿಯ ನೇತೃತ್ವ ವಹಿಸಲಿದ್ದಾರೆ. ಭಾರತ ವಿರುದ್ಧ ಸರಣಿ ಬುಧವಾರ ಆರಂಭವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.