ನವದೆಹಲಿ: ‘ತಮಿಳುನಾಡಿನ ಕೆಲವು ಚಿತ್ರನಿರ್ಮಾಪಕರು, ವಿತರಕರು ಮತ್ತು ಹೂಡಿಕೆದಾರರಿಗೆ ಸೇರಿದ 40 ಸ್ಥಳಗಳಲ್ಲಿ ಶೋಧಕಾರ್ಯ ನಡೆಸಿದ ವೇಳೆ ಒಟ್ಟು ₹200 ಕೋಟಿಗೂ ಅಧಿಕ ಅಘೋಷಿತ ಆದಾಯಕ್ಕೆ ಸಂಬಂಧಿಸಿದ ದಾಖಲೆಗಳು, ನಗದು, ಆಭರಣ ಪತ್ತೆಯಾಗಿದೆ’ ಎಂದು ಕೇಂದ್ರ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ಶನಿವಾರ ತಿಳಿಸಿದೆ.
ಚೆನ್ನೈ, ಮಧುರೈ, ಕೊಯಮತ್ತೂರು ಮತ್ತು ವೆಲ್ಲೂರ್ನಲ್ಲಿ ಶೋಧಕಾರ್ಯ ನಡೆಸಲಾಗಿದೆ. ₹26 ಕೋಟಿ ನಗದು ಮತ್ತು ₹3 ಕೋಟಿ ಮೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಿಬಿಡಿಟಿ ಮಾಹಿತಿ ನೀಡಿದೆ.
‘ಹಣ ಅಕ್ರಮ ವರ್ಗಾವಣೆ ಮತ್ತು ಹೂಡಿಕೆಗಳಿಗೆ ಸಂಬಂಧಿಸಿದ ದಾಖಲೆಗಳು, ಡಿಜಿಟಲ್ ಉಪಕರಣ
ಗಳನ್ನೂ ವಶಪಡಿಸಿಕೊಳ್ಳಲಾಗಿದೆ. ಕೆಲವು ಸಿನಿಮಾ ನಿರ್ಮಾಣ ಸಂಸ್ಥೆಗಳು ತೆರಿಗೆ ವಿನಾಯಿತಿ ಪಡೆಯಲು, ಸಿನಿಮಾದಿಂದ ಬಂದ ಆದಾಯವು ಕಡಿಮೆ ಎಂದು ತೋರಿಸಿದ್ದನ್ನು ಪತ್ತೆಹಚ್ಚಲಾಗಿದೆ’ ಎಂದು ಹೇಳಿದೆ.
ಅಕ್ರಮವಾಗಿ ಸಂಗ್ರಹಿಸಿದ ಆದಾಯವನ್ನು ಅಘೋಷಿತ ಹೂಡಿಕೆಗೆ ಮತ್ತು ಅಘೋಷಿತ ಪಾವತಿಗೆ ಬಳಕೆ ಮಾಡಲಾಗಿದೆ ಎಂದು ಹೇಳಿದೆ.
ಚಿತ್ರಮಂದಿರಗಳಿಂದ ‘ದಾಖಲೆಗಳನ್ನು ನಿರ್ವಹಿಸದೆಯೇ ಹಣ’ವನ್ನು ಸಂಗ್ರಹಿಸಲಾಗುತ್ತಿದೆ ಎಂದು ಸಿನಿಮಾ ವಿತರಕರಿಂದ ವಶಪಡಿಸಿಕೊಂಡ ದಾಖಲೆಗಳಿಂದ ತಿಳಿದುಬಂದಿದೆ. ‘ಚಿತ್ರಮಂದಿರಗಳಿಂದ ಕಡಿಮೆ ಆದಾಯ ಬಂದಿದೆ’ ಎಂದು ತೋರಿಸಲಾಗುತ್ತದೆ ಎಂದು ಸಿಬಿಡಿಟಿ ಹೇಳಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.