ನವದೆಹಲಿ (ಎಎಫ್ಪಿ): ಕೇರಳದ ಕರಾವಳಿಯಲ್ಲಿ 2012ರಲ್ಲಿ ಇಟಲಿಯ ನೌಕಾಪಡೆಯ ಇಬ್ಬರು ಸಿಬ್ಬಂದಿ ಗುಂಡಿಟ್ಟು ಕೊಂದಿದ್ದ ಭಾರತದ ಇಬ್ಬರು ಮೀನುಗಾರರ ಕುಟುಂಬಗಳಿಗೆ ಇಟಲಿಯು 1.1 ಮಿಲಿಯನ್ ಯುರೊ (ಸುಮಾರು ₹ 10 ಕೋಟಿ) ಪರಿಹಾರ ನೀಡಲಿದೆ. ಪರಿಹಾರ ಮೊತ್ತ ಸ್ವೀಕರಿಸಲು ಭಾರತ ಒಪ್ಪಿದೆ. ಈ ಮೂಲಕ ಉಭಯ ರಾಷ್ಟ್ರಗಳ ನಡುವಿನ ಸಂಬಂಧದಲ್ಲಿ ಬಿರುಕಿಗೆ ಕಾರಣವಾಗಿದ್ದ ಸುದೀರ್ಘ ಪ್ರಕರಣಕ್ಕೆ ಅಂತ್ಯ ಸಿಕ್ಕಂತಾಗಿದೆ.
ರೋಮ್, ಭಾರತ ಸರ್ಕಾರದೊಂದಿಗೆ ಸುದೀರ್ಘ ಮಾತುಕತೆ ನಡೆಸಿದ ನಂತರ ಸಂತ್ರಸ್ಥ ಮೀನುಗಾರರ ಕುಟುಂಬಗಳಿಗೆ ಮತ್ತು ಗುಂಡಿನ ದಾಳಿಯಿಂದ ಹಾನಿಗೊಳಗಾದ ದೋಣಿಯ ಮಾಲೀಕರಿಗೆ ಒಟ್ಟು ₹10 ಕೋಟಿ ಪರಿಹಾರ ನೀಡಲು ಸಿದ್ಧವಾಗಿದೆ ಎಂದು ಇಟಲಿ ಪ್ರತಿನಿಧಿಸುತ್ತಿರುವ ವಕೀಲ ಸುಹೇಲ್ ದತ್ ಶುಕ್ರವಾರಸುಪ್ರೀಂ ಕೋರ್ಟ್ಗೆ ತಿಳಿಸಿದರು.
‘ನಿರ್ಧರಿತ ಪರಿಹಾರ ಮೊತ್ತ’ ಸ್ವೀಕರಿಸಲು ಸಂತ್ರಸ್ಥ ಕುಟುಂಬಗಳು ಒಪ್ಪಿವೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಕೂಡ ಹೇಳಿದ್ದಾರೆ.
ಇಟಲಿಯಿಂದ ಹಣ ಸ್ವೀಕರಿಸಿದ ಒಂದು ವಾರದೊಳಗೆ ಸುಪ್ರೀಂ ಕೋರ್ಟ್ ಖಾತೆಗೆ ಜಮಾ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದ ಪೀಠವು, ಈ ಪ್ರಕರಣವನ್ನು ಏಪ್ರಿಲ್ 19ರಂದು ವಿಚಾರಣೆಗೆ ಕೈಗೆತ್ತಿಕೊಳ್ಳುವುದಾಗಿ ಹೇಳಿದೆ.
ಹೇಗ್ನಲ್ಲಿರುವ ಶಾಶ್ವತ ಮಧ್ಯಸ್ಥಿಕೆ ನ್ಯಾಯಮಂಡಳಿ (ಪಿಸಿಎ) ಇಟಲಿಯ ನೌಕಾಪಡೆಯ ಇಬ್ಬರು ಸಿಬ್ಬಂದಿ ವಿರುದ್ಧ ಕಾನೂನು ಕ್ರಮ ಜರುಗಿಸಬಹುದಾಗಿದೆ ಎಂದು ಕಳೆದ ಜುಲೈನಲ್ಲಿ ಆದೇಶ ಹೊರಡಿಸಿದ ನಂತರ ಈ ಬೆಳವಣಿಗೆ ನಡೆದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.