ADVERTISEMENT

ಕೇರಳ ಪುರಸಭೆಯಲ್ಲಿ 'ಜೈ ಶ್ರೀರಾಮ್' ಬ್ಯಾನರ್: ವಿವಾದ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಡಿಸೆಂಬರ್ 2020, 6:30 IST
Last Updated 18 ಡಿಸೆಂಬರ್ 2020, 6:30 IST
ಪಾಲಕ್ಕಾಡ್ ಪುರಸಭೆಯಲ್ಲಿ ಜೈಶ್ರೀರಾಮ್ ಬ್ಯಾನರ್ ಪ್ರದರ್ಶನ (ವೈರಲ್ ವಿಡಿಯೊದ ಸ್ಕ್ರೀನ್‌ಶಾಟ್ ಚಿತ್ರ)
ಪಾಲಕ್ಕಾಡ್ ಪುರಸಭೆಯಲ್ಲಿ ಜೈಶ್ರೀರಾಮ್ ಬ್ಯಾನರ್ ಪ್ರದರ್ಶನ (ವೈರಲ್ ವಿಡಿಯೊದ ಸ್ಕ್ರೀನ್‌ಶಾಟ್ ಚಿತ್ರ)   

ಪಾಲಕ್ಕಾಡ್(ಕೇರಳ): ಇದೀಗಷ್ಟೇ ಕೇರಳ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಚುನಾವಣೆ ನೆರವೇರಿದ್ದು, ಫಲಿತಾಂಶ ಹೊರಬಿದ್ದಿದೆ. ಈ ಮಧ್ಯೆ ಪಾಲಕ್ಕಾಡ್ ಜಿಲ್ಲೆಯ ಪುರಸಭೆಯನ್ನು ಉಳಿಸಿಕೊಂಡಿರುವ ಬಿಜೆಪಿ ಸಂಭ್ರಮಾಚರಣೆಯ ಮಧ್ಯೆ, ಪುರಸಭೆಯ ಕಟ್ಟಡದಲ್ಲಿ 'ಜೈ ಶ್ರೀರಾಮ್' ಬ್ಯಾನರ್ ಪ್ರದರ್ಶಿಸಿರುವುದು ವಿವಾದವನ್ನು ಹುಟ್ಟು ಹಾಕಿದೆ. ಈ ಸಂಬಂಧ ಪೊಲೀಸರು ಪ್ರಕರಣವನ್ನು ದಾಖಲಿಸಿದ್ದಾರೆ.

ಡಿಸೆಂಬರ್ 16 ಬುಧವಾರ ಮತಎಣಿಕೆಯ ಬಳಿಕ ನಡೆದ ವಿಜಯೋತ್ಸವದ ಸಂದರ್ಭದಲ್ಲಿ ಪುರಸಭೆಯ ಮೇಲೆ ಬಿಜೆಪಿ ಪಕ್ಷದ ಕೆಲವು ಕಾರ್ತಕರ್ತರು ಜೈ ಶ್ರೀರಾಮ್ ಬ್ಯಾನರ್ ಪ್ರದರ್ಶಿಸಿದರು.

ಕೇರಳದಲ್ಲಿ ಬಿಜೆಪಿ ಆಡಳಿತವಿರುವ ಏಕೈಕ ಪುರಸಭೆ ಪಾಲಕ್ಕಾಡ್ ಆಗಿದೆ. 52 ವಾರ್ಡ್‌ಗಳ ಪೈಕಿ 28ರಲ್ಲಿ ಗೆದ್ದಿರುವ ಬಿಜೆಪಿ ಅಧಿಕಾರವನ್ನು ಉಳಿಸಿಕೊಂಡಿದೆ.

ADVERTISEMENT

ಸಂಭ್ರಮದಲ್ಲಿದ್ದ ಪಕ್ಷದ ಕಾರ್ಯಕರ್ತರು ಪುರಸಭೆಯ ಕಟ್ಟಡದ ಮೇಲಕ್ಕೆ ಹತ್ತಿ ಜೈ ಶ್ರೀರಾಮ್ ಪತಾಕೆಯನ್ನು ನೇತು ಹಾಕಿದರು. ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಬ್ಯಾನರ್‌ಗಳನ್ನು ಪ್ರದರ್ಶಿಸಲಾಯಿತು.

ಬಳಿಕ ಪಕ್ಷದ ಮುಖಂಡರು ಎಚ್ಚರಿಕೆ ಮಾಡಿದ ಬಳಿಕ ಜೈ ಶ್ರೀರಾಮ್ ಬ್ಯಾನರ್ ಅನ್ನುತೆರವುಗೊಳಿಸಲಾಯಿತು. ಆಗಲೇ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ವೈರಲ್ ಆಗಿದ್ದು, ವಿವಾದಕ್ಕೆ ಕಾರಣವಾಯಿತು.

ಇದು ಬಿಜೆಪಿಯ ನೈಜ ಮುಖವನ್ನು ಬಹಿರಂಗಪಡಿಸಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ಹಾಗೂ ಸಿಪಿಎಂ ಪಕ್ಷಗಳು ಪೊಲೀಸ್ ಕಠಿಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದೆ.

ಪುರಸಭೆ ಸರ್ಕಾರಿ ಕಚೇರಿಯಲ್ಲಿ ಧಾರ್ಮಿಕ ಚಿಹ್ನೆಗಳನ್ನು ಪ್ರದರ್ಶಿಸುವುದರ ವಿರುದ್ಧ ಪೊಲೀಸ್ ದೂರು ಸಲ್ಲಿಸಲಾಯಿತು. ಇದರ ಆಧಾರದಲ್ಲಿ ಐಪಿಸಿ 153 ಅಡಿಯಲ್ಲಿ ಪ್ರಚೋದನಕಾರಿ ಬ್ಯಾನರ್ ಪ್ರದರ್ಶನಕ್ಕಾಗಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.