ADVERTISEMENT

ಯುದ್ಧಘೋಷವಾಗಿ ‘ಜೈಶ್ರೀರಾಂ’; 49 ಪ್ರಸಿದ್ಧ ವ್ಯಕ್ತಿಗಳಿಂದ ಮೋದಿಗೆ ಪತ್ರ

​ಪ್ರಜಾವಾಣಿ ವಾರ್ತೆ
Published 24 ಜುಲೈ 2019, 19:46 IST
Last Updated 24 ಜುಲೈ 2019, 19:46 IST
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಪರ್ಣಾಸೇನ್‌
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಪರ್ಣಾಸೇನ್‌   

ನವದೆಹಲಿ: ದೇಶದಲ್ಲಿ ನಡೆಯುತ್ತಿರುವ ‘ಹಲವು ದುರಂತ ಘಟನೆಗಳ’ ಬಗ್ಗೆ ಕಳವಳ ವ್ಯಕ್ತಪಡಿಸಿ ಹಲವು ಪ್ರಸಿದ್ಧ ವ್ಯಕ್ತಿಗಳು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

‘ಜೈ ಶ್ರೀರಾಂ’ ಎಂಬುದು ‘ಪ್ರಚೋದನಕಾರಿಯಾದ ಯುದ್ಧ ಘೋಷ’ವಾಗಿ ಮಾರ್ಪಟ್ಟಿದೆ. ಇದರ ಹೆಸರಿನಲ್ಲಿ ಹಲವು ಗುಂಪು ಹತ್ಯೆಗಳು ನಡೆದಿವೆ ಎಂದು ಪತ್ರದಲ್ಲಿ ಅತಂಕ ವ್ಯಕ್ತಪಡಿಸಲಾಗಿದೆ.

ಭಿನ್ನಾಭಿಪ್ರಾಯ ಇಲ್ಲದೆ ಪ್ರಜಾಪ್ರಭುತ್ವವೇ ಇಲ್ಲ ಎಂಬುದಕ್ಕೆ ಒತ್ತು ನೀಡಿ ಪತ್ರದಲ್ಲಿ ವಿವರಿಸಲಾಗಿದೆ. ಸಿನಿಮಾ ನಿರ್ದೇಶಕರಾದ ಶ್ಯಾಮ್‌ ಬೆನಗಲ್‌ ಮತ್ತು ಅಪರ್ಣಾ ಸೇನ್‌, ಗಾಯಕಿ ಶುಭಾ ಮುದ್ಗಲ್‌, ಇತಿಹಾ
ಸಕಾರ ರಾಮಚಂದ್ರ ಗುಹಾ, ಸಮಾಜಶಾಸ್ತ್ರಜ್ಞ ಅಶೀಶ್‌ ನಂದಿ ಸೇರಿ 49 ಮಂದಿ ಪತ್ರಕ್ಕೆ ಸಹಿ ಹಾಕಿದ್ದಾರೆ.

ADVERTISEMENT

‘ಶಾಂತಿಪ್ರಿಯರಾದ ನಮಗೆ ಭಾರತೀಯರೆನ್ನಲು ಹೆಮ್ಮೆಯಿದೆ. ನಮ್ಮ ಪ್ರೀತಿಯ ದೇಶದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಹಲವು ದುರಂತ ಘಟನೆಗಳ ಬಗ್ಗೆ ನಮಗೆ ಭಾರಿ ಕಳವಳ ಉಂಟಾಗಿದೆ’ ಎಂದು ಹೇಳಲಾಗಿದೆ.

‘ಮುಸ್ಲಿಮರು, ದಲಿತರು ಮತ್ತು ಅಲ್ಪಸಂಖ್ಯಾತ ಸಮುದಾಯದ ಮೇಲಿನ ಗುಂಪು ಹಲ್ಲೆ ತಕ್ಷಣವೇ ನಿಲ್ಲಬೇಕು. 2016ರಲ್ಲಿ ದಲಿತರ ಮೇಲೆ ಇಂತಹ 840 ಪ್ರಕರಣಗಳು ನಡೆದಿವೆ ಎಂಬ ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೊದ (ಎನ್‌ಸಿಆರ್‌ಬಿ) ವರದಿ ಆಘಾತ ಉಂಟು ಮಾಡಿದೆ. ಹಾಗೆಯೇ, ಇಂತಹ ಕೃತ್ಯ ಎಸಗಿದವರಿಗೆ ಶಿಕ್ಷೆಯಾಗುವ ಪ್ರಮಾಣ ಇಳಿಕೆಯಾಗಿರುವುದು ಕೂಡ ಆಘಾತಕಾರಿಯೇ ಆಗಿದೆ’ ಎಂದು ಕಳವಳ ವ್ಯಕ್ತಪಡಿಸಲಾಗಿದೆ.

ರಾಮನ ಹೆಸರಿನಲ್ಲಿ ಗುಂಪು ಹಲ್ಲೆಗಳು ನಡೆಯುತ್ತಿವೆ. ಧರ್ಮದ ಹೆಸರಿನಲ್ಲಿ ಇಷ್ಟೊಂದು ಹಿಂಸೆ ನಡೆಯುತ್ತಿರುವುದು ಆಘಾತಕಾರಿ ಎಂದು ಹೇಳಲಾಗಿದೆ.‘ಇದು ಮಧ್ಯ ಯುಗದ ಕಾಲವಲ್ಲ! ಭಾರತದ ಬಹುಸಂಖ್ಯಾತ ಸಮುದಾಯದ ಬಹಳಷ್ಟು ಮಂದಿಗೆ ರಾಮ ಎಂಬುದು ಪವಿತ್ರ ಹೆಸರು. ರಾಮನ ಹೆಸರಿಗೆ ಈ ರೀತಿ ಕಳಂಕ ಉಂಟು ಮಾಡುವುದನ್ನು ದೇಶದ ಅತ್ಯುನ್ನತ ಹುದ್ದೆಯಲ್ಲಿರುವ ನೀವು ತಡೆಯಲೇಬೇಕು’ ಎಂದು ಪ್ರಧಾನಿಯನ್ನು ಕೋರಲಾಗಿದೆ.

ಅಧಿಕಾರದಲ್ಲಿರುವ ಪಕ್ಷವೇ ದೇಶ ಅಲ್ಲ. ಅದು ದೇಶದ ಒಂದು ರಾಜಕೀಯ ಪಕ್ಷ ಮಾತ್ರ. ಹಾಗಾಗಿ, ಸರ್ಕಾರದ ವಿರುದ್ಧದ ನಿಲುವನ್ನು ದೇಶವಿರೋಧಿ ನಿಲುವು ಎಂದು ಸಮೀಕರಿಸಬಾರದು. ಭಿನ್ನಮತವನ್ನು ದಮನಿಸದಿರುವ ಮುಕ್ತ ವಾತಾವರಣವು ದೇಶವನ್ನು ಇನ್ನಷ್ಟು ಬಲಿಷ್ಠವಾಗಿಸುತ್ತದೆ ಎಂದು ಪತ್ರದಲ್ಲಿ ಪ್ರತಿಪಾದಿಸಲಾಗಿದೆ.

ಪತ್ರದ ಕೋರಿಕೆ

ಭಿನ್ನಾಮತವಿಲ್ಲದೆ ಪ್ರಜಾಪ್ರಭುತ್ವವೇ ಇಲ್ಲ. ಸರ್ಕಾರದ ಬಗ್ಗೆ ಭಿನ್ನಮತ ಹೊಂದಿದ್ದಾರೆ ಎಂಬ ಕಾರಣಕ್ಕೆ ಜನರಿಗೆ ದೇಶದ್ರೋಹಿಗಳು ಅಥವಾ ನಗರ ನಕ್ಸಲರು ಎಂಬ ಹಣೆಪಟ್ಟಿ ಕಟ್ಟಬಾರದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.