ನವದೆಹಲಿ(ಪಿಟಿಐ): ಪತ್ರಿಕೆ ಮತ್ತು ಪುಸ್ತಕಗಳ ನೋಂದಣಿ ಕಾಯ್ದೆ (ಪಿಆರ್ಪಿ ಕಾಯ್ದೆ) ಉಲ್ಲಂಘಿಸಿದ ಸಂದರ್ಭದಲ್ಲಿ ಪ್ರಕಾಶಕರಿಗೆ ಹಾಗೂ ಮುದ್ರಣಾಲಯಗಳನ್ನು ನಡೆಸುವವರಿಗೆ ಇನ್ನು ಮುಂದೆ ಜೈಲು ವಿಧಿಸಲಾಗುವುದಿಲ್ಲ.
ಹೊಸ ‘ಜನ ವಿಶ್ವಾಸ ಕಾಯ್ದೆ’ಯು ಶುಕ್ರವಾರದಿಂದ ಜಾರಿಗೆ ಬರಲಿದ್ದು, ಈ ಕುರಿತು ಕೇಂದ್ರ ಸರ್ಕಾರ ಗುರುವಾರ ಅಧಿಸೂಚನೆ ಪ್ರಕಟಿಸಿದೆ.
ಈ ಮೊದಲು, ಕಾಯ್ದೆ ಉಲ್ಲಂಘನೆ ಸಂದರ್ಭದಲ್ಲಿ ತಪ್ಪಿತಸ್ಥರಿಗೆ ಕಾಯ್ದೆಯ ಸೆಕ್ಷನ್ 12, 13 ಹಾಗೂ 14ರಡಿ ಜೈಲು ಶಿಕ್ಷೆ ವಿಧಿಸಲಾಗುತ್ತಿತ್ತು. ಕಾಯ್ದೆಯಲ್ಲಿನ ಈ ಅವಕಾಶಗಳನ್ನು ತೆಗೆದು ಹಾಕಲಾಗಿದೆ.
ತಪ್ಪು ಮಾಹಿತಿಗಳಿಂದ ಕೂಡಿದ ಮುದ್ರಣ, ಘೋಷಣಾ ಪತ್ರ ಇಲ್ಲದೆಯೇ ಮುದ್ರಣಾಲಯ ನಡೆಸುವುದು, ತಪ್ಪು ಘೋಷಣಾಪತ್ರ ಹೊಂದಿರುವುದು, ಅಸಮರ್ಪಕವಾಗಿ ಮಾಹಿತಿ ಪ್ರಕಟಿಸುವಂತಹ ನಡೆಗಳಿಗೆ ಇನ್ನು ಮುಂದೆ ಆರು ತಿಂಗಳು ಜೈಲು ಶಿಕ್ಷೆ ವಿಧಿಸಲಾಗುವುದಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.