ADVERTISEMENT

ಜೈಪುರ: ಮೇಯರ್‌, ಮೂವರು ಕೌನ್ಸಿಲರ್‌ಗಳ ಅಮಾನತು; ಬಿಜೆ‍ಪಿ ಆಕ್ಷೇಪ

ಪಿಟಿಐ
Published 7 ಜೂನ್ 2021, 6:40 IST
Last Updated 7 ಜೂನ್ 2021, 6:40 IST
ಸೊಮ್ಯಾ ಗುರ್ಜರ್ –ಟ್ವಿಟರ್‌ ಚಿತ್ರ
ಸೊಮ್ಯಾ ಗುರ್ಜರ್ –ಟ್ವಿಟರ್‌ ಚಿತ್ರ   

ಜೈಪುರ: ಸ್ಥಳೀಯ ಸಂಸ್ಥೆಯ ಆಯುಕ್ತರೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದಡಿ ಜೈಪುರ ಗ್ರೇಟರ್‌ ಮುನ್ಸಿಪಲ್‌ ಕಾರ್ಪೊರೇಶನ್‌ನ ಮೇಯರ್‌ ಮತ್ತು ಮೂವರು ಸದಸ್ಯರನ್ನು ರಾಜಸ್ಥಾನ ಸರ್ಕಾರ ಅಮಾನತುಗೊಳಿಸಿದೆ. ಈ ನಡೆಗೆ ಬಿಜೆಪಿಯಿಂದ ಭಾರಿ ಆಕ್ಷೇಪ ವ್ಯಕ್ತವಾಗಿದೆ.

ಕಾಂಗ್ರೆಸ್‌ ಸರ್ಕಾರವು ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆ ನಡೆಸಲೂ ನಿರ್ಧರಿಸಿದೆ.

ಸ್ಥಳೀಯ ಆಡಳಿತವು ಈ ಸಂಬಂಧ ಭಾನುವಾರ ರಾತ್ರಿ ಆದೇಶ ಹೊರಡಿಸಿದ್ದು, ಮೇಯರ್‌ ಸೌಮ್ಯ ಗುರ್ಜಾರ್, ಸದಸ್ಯರಾದ ಅಜಯ್‌ ಸಿಂಗ್ ಚೌಹಾಣ್‌, ಪಾರಸ್‌ ಸಿಂಗ್‌( ಈ ಮೂವರು ಬಿಜೆಪಿಗೆ ಸೇರಿದವರು) ಮತ್ತು ಶಂಕರ್‌ ಶರ್ಮಾ(ಪಕ್ಷೇತರ ಸದಸ್ಯ) ಅವರನ್ನು ಅಮಾನತುಗೊಳಿಸಲಾಗಿದೆ.

ADVERTISEMENT

‘ಈ ನಡೆಯನ್ನು ಖಂಡಿಸಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸತೀಶ್‌ ಪೊನಿಯಾ ಅವರು, ನಾವು ನ್ಯಾಯಕ್ಕಾಗಿ ಹೋರಾಡುತ್ತೇವೆ. ಮೇಯರ್‌ ಮತ್ತು ಸದಸ್ಯರನ್ನು ಅಮಾನತುಗೊಳಿಸಿರುವುದು ದುರದೃಷ್ಟಕರ. ಇದು ಕಾಂಗ್ರೆಸ್‌ ಪತನಕ್ಕೆ ಕಾರಣವಾಗಲಿದೆ’ ಎಂದಿದ್ದಾರೆ.

ಮನೆ ಬಾಗಿಲಿನಿಂದ ಕಸ ಸಂಗ್ರಹಿಸುವ ಕಂಪನಿಯ ಕುರಿತಾಗಿ ಚರ್ಚಿಸಲು ಶುಕ್ರವಾರ ಮೇಯರ್‌ ಕೊಠಡಿಯಲ್ಲಿ ಸಭೆ ಆಯೋಜಿಸಲಾಗಿತ್ತು. ಇದರಲ್ಲಿ ಆಯುಕ್ತ ಯಜ್ಞ ಮಿತ್ರ ಸಿಂಗ್ಅವರು ಭಾಗವಹಿಸಿದ್ದರು. ಈ ಸಭೆಯಲ್ಲಿ ಆಯುಕ್ತರು ಮತ್ತು ಮೇಯರ್‌ ನಡುವೆ ವಾಗ್ವಾದ ನಡೆದಿದೆ.ಈ ಮಧ್ಯೆ ಸದಸ್ಯರು ಆಯುಕ್ತರನ್ನು ನಿಂದಿಸಿದ್ದು ಮಾತ್ರವಲ್ಲದೆ ಅವರ ಮೇಲೆ ಹಲ್ಲೆಯನ್ನೂ ನಡೆಸಿದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.