ADVERTISEMENT

’ಮೇಘಾಲಯದ ಸರ್ಕಾರ ಅತಿಭ್ರಷ್ಟ’ ಎಂಬ ಶಾ ಹೇಳಿಕೆಯ ತನಿಖೆಗೆ ಸಿಬಿಐಗೆ ಜೈರಾಮ್ ಪತ್ರ

ಪಿಟಿಐ
Published 23 ಮಾರ್ಚ್ 2023, 11:40 IST
Last Updated 23 ಮಾರ್ಚ್ 2023, 11:40 IST
ಜೈರಾಮ್ ರಮೇಶ್ –ಸಂಗ್ರಹ ಚಿತ್ರ
ಜೈರಾಮ್ ರಮೇಶ್ –ಸಂಗ್ರಹ ಚಿತ್ರ   

ನವದೆಹಲಿ: ಮೇಘಾಲಯದಲ್ಲಿ ಕಾನ್ರಾಡ್ ಸಂಗ್ಮಾ ನೇತೃತ್ವದ ಸರ್ಕಾರ ಭ್ರಷ್ಟವಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆನ್ನಲಾದ ಹೇಳಿಕೆ ಉಲ್ಲೇಖಿಸಿ, ಈ ಕುರಿತು ತನಿಖೆ ನಡೆಸಬೇಕು ಎಂದು ಕೋರಿ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ(ಸಂವಹನ) ಜೈರಾಮ್ ರಮೇಶ್ ಅವರು ಸಿಬಿಐ ನಿರ್ದೇಶಕ ಸುಬೋಧ್ ಕುಮಾರ್ ಜೈಸ್ವಾಲ್ ಅವರಿಗೆ ಪತ್ರ ಬರೆದಿದ್ದಾರೆ.

ಪತ್ರದಲ್ಲಿ ಜೈರಾಮ್ ಅವರು,’ 2023 ಫೆಬ್ರವರಿ 17ರಂದು ಅಮಿತ್‌ ಶಾ ಅವರು ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುವ ವೇಳೆ ಮೇಘಾಲಯದಲ್ಲಿನ ಸರ್ಕಾರ ದೇಶದಲ್ಲೇ ಅತಿ ಭ್ರಷ್ಟ ಸರ್ಕಾರ’ ಎಂದಿದ್ದಾರೆ. ಈ ಹೇಳಿಕೆಯ ಸತ್ಯಾಸತ್ಯತೆ ಅರಿಯಲು ಶಾ ಅವರನ್ನು ವಿಚಾರಣೆಗೆ ಒಳಪಡಿಸಬೇಕು’ ಎಂದು ಕೋರಿದ್ದಾರೆ.

ಪತ್ರ ಬರೆದ ದಿನಾಂಕ ಮಾ.21 ಎಂದು ನಮೂದಿಸಿದ್ದು, ’ದೇಶದ ಗೃಹ ಸಚಿವರೂ ಆಗಿರುವ ಅಮಿತ್ ಶಾ ಅವರಿಗೆ ತಮ್ಮ ಹುದ್ದೆಯ ಅಧಿಕಾರ ವ್ಯಾಪ್ತಿಯಲ್ಲಿ ಭ್ರಷ್ಟಾಚಾರದ ಕುರಿತು ಹೆಚ್ಚಿನ ಮಾಹಿತಿ ಗೊತ್ತಿರುತ್ತದೆ. ಹಾಗಾಗಿ ಶಾ ಅವರನ್ನು ವಿಚಾರಣೆಗೆ ಒಳಪಡಿಸಿದರೆ ಈ ಬಗ್ಗೆ ಖಂಡಿತಾ ತಿಳಿಯಬಹುದು’ ಎಂದು ಅವರು ಆಗ್ರಹಿಸಿದ್ದಾರೆ.

ADVERTISEMENT

ಇತ್ತೀಚೆಗಷ್ಟೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಭಾರತ್‌ ಜೋಡೋ ಯಾತ್ರೆಯ ಸಂದರ್ಭ ’ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿರುವ ಮಹಿಳೆಯರ ಬಗ್ಗೆ ತಿಳಿದಿದೆ’ ಎಂಬ ಹೇಳಿಕೆ ಆಧರಿಸಿ ದೆಹಲಿ ಪೊಲೀಸರು ರಾಹುಲ್ ಅವರನ್ನು ವಿಚಾರಣೆ ನಡೆಸಿದ್ದರು. ಈ ಬೆಳವಣಿಗೆಯ ನಂತರ ಜೈರಾಮ್ ಅವರು ಶಾ ಹೇಳಿಕೆ ಉಲ್ಲೇಖಿಸಿ ಪತ್ರ ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.