ನವದೆಹಲಿ: ಜಮ್ಮು ಮತ್ತು ಕಾಶ್ಮೀರ ಆಡಳಿತದಲ್ಲಿ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (ಪಿಎಂಜೆಎವೈ)-ಸೆಹತ್ ಯೋಜನೆಯು ಮಗದೊಂದು ಗರಿ ಎಂದು ವಿವರಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಹುಶಃ ಈ ಯೋಜನೆ ಪ್ರತಿ ನಾಗರಿಕರಿಗೂ ಲಭ್ಯವಾಗಲಿರುವ ಮೊದಲ ರಾಜ್ಯ/ಕೇಂದ್ರಾಡಳಿತ ಪ್ರದೇಶ ಎಂದು ಹೇಳಿದರು.
ದೇಶದ ಉಳಿದ ಭಾಗಗಳಲ್ಲಿ ಆಯುಷ್ಮಾನ್ ಭಾರತ್ ಪಿಎಂಜೆಎವೈ ಯೋಜನೆಯು ಬಡವರಿಗೆ ಮಾತ್ರ ಲಭ್ಯವಿದೆ.
ಬಹುಶಃ ಜಮ್ಮು ಮತ್ತು ಕಾಶ್ಮೀರ, ಪ್ರತಿಯೊಬ್ಬ ನಾಗರಿಕರಿಗೂ ಈ ಯೋಜನೆ ಲಭ್ಯವಾಗಲಿರುವ ಮೊದಲ ರಾಜ್ಯ/ಕೇಂದ್ರಾಡಳಿತ ಪ್ರದೇಶವಾಗಲಿದೆ. ಇದು ಪ್ರಧಾನ ಮಂತ್ರಿ ಹಾಗೂ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಮಾಡಿದ ಪ್ರಯತ್ನಗಳ ಫಲವಾಗಿದೆ. ಈ ಯೋಜನೆಯ ಲಾಭ ಭಾನುವಾರದಿಂದ ಪಡೆಯಲು ಸಾಧ್ಯವಾಗಲಿದೆ ಎಂದು ಅಮಿತ್ ಶಾ, ಪಿಎಂಜೆಎವೈ ಸೆಹತ್ ಯೋಜನೆಯಯನ್ನು ವಿಡಿಯೊ ಕಾನ್ಫೆರನ್ಸ್ ಮೂಲಕ ಉದ್ಘಾಟಿಸಿ ಮಾತನಾಡಿದರು.
ಈ ಮಹತ್ವದ ಯೋಜನೆಯ ಮುಖಾಂತರ ಮುಂದಿನ ದಿನಗಳಲ್ಲಿ ಜಮ್ಮು ಮತ್ತು ಕಾಶ್ಮೀರದ ಆರೋಗ್ಯ ಕ್ಷೇತ್ರದಲ್ಲಿ ಕಾಂತ್ರಿಕಾರಿ ಬದಲಾವಣೆಯಾಗಲಿದೆ ಎಂದು ಕೇಂದ್ರ ಗೃಹ ಸಚಿವರು ತಿಳಿಸಿದರು.
ಸುಮಾರು 15 ಲಕ್ಷ ಕುಟುಂಬಗಳು ಐದು ಲಕ್ಷ ರೂ. ವರೆಗಿನ ಎಲ್ಲ ಸೌಲಭ್ಯಗಳನ್ನು ಉಚಿತವಾಗಿ ಪಡೆಯಲಿದ್ದಾರೆ. ಆಯುಷ್ಮಾನ್ ಭಾರತ್ ಯೋಜನೆ ಹೆಸರಲ್ಲಿ ಬಡವರಿಗೆ ಮಾತ್ರ ಈ ಯೋಜನೆಯನ್ನು ದೇಶದ್ಯಾಂತ ಜಾರಿಗೆ ತರಲಾಗಿದೆ. ಕಳೆದೆರಡು ವರ್ಷಗಳಲ್ಲಿ 1.5 ಕೋಟಿ ಜನರು ಸಣ್ಣ ಹಾಗೂ ದೊಡ್ಡ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಆಯುಷ್ಮಾನ್ ಯೋಜನೆಯಡಿ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದವರು ಹೇಳಿದರು.
ಜಮ್ಮು ಮತ್ತು ಕಾಶ್ಮೀರದಲ್ಲಿ 229 ಸರ್ಕಾರಿ ಮತ್ತು 35 ಖಾಸಗಿ ಆಸ್ಪತ್ರೆಗಳನ್ನು ಈ ಯೋಜನೆಗೆ ಸೇರ್ಪಡೆಗೊಳಿಸಲಾಗಿದೆ ಎಂದವರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.