ADVERTISEMENT

ಮೋದಿ ಜತೆಗಿನ ಸಭೆಗೆ ಹಾಜರಾಗುವ ಬಗ್ಗೆ ಏನೆನ್ನುತ್ತಾರೆ ಜಮ್ಮು–ಕಾಶ್ಮೀರ ನಾಯಕರು?

ಡೆಕ್ಕನ್ ಹೆರಾಲ್ಡ್
Published 19 ಜೂನ್ 2021, 8:20 IST
Last Updated 19 ಜೂನ್ 2021, 8:20 IST
ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ – ಎಎಫ್‌ಪಿ ಚಿತ್ರ
ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ – ಎಎಫ್‌ಪಿ ಚಿತ್ರ   

ಶ್ರೀನಗರ: ಕೇಂದ್ರ ಸರ್ಕಾರವು ಕರೆದಿರುವ ಸರ್ವ ಪಕ್ಷ ಸಭೆಯಲ್ಲಿ ಭಾಗವಹಿಸುವ ಕುರಿತು ನಿರ್ಧಾರ ಕೈಗೊಳ್ಳಲು ಜಮ್ಮು ಮತ್ತು ಕಾಶ್ಮೀರದ ರಾಜಕೀಯ ಪಕ್ಷಗಳು ಸಮಾಲೋಚನೆ ನಡೆಸಲಿವೆ.

ಕೇಂದ್ರಾಡಳಿತ ಪ್ರದೇಶದಲ್ಲಿ ಚುನಾವಣೆ ನಡೆಸುವುದೂ ಸೇರಿದಂತೆ ರಾಜಕೀಯ ವಿಷಯಗಳ ಬಗ್ಗೆ ಚರ್ಚೆ ನಡೆಸುವ ಸಲುವಾಗಿ ಜಮ್ಮು–ಕಾಶ್ಮೀರದ ಎಲ್ಲ ರಾಜಕೀಯ ಪಕ್ಷಗಳ ಮುಖಂಡರ ಜತೆ ಜೂನ್ 24ರಂದು ಕೇಂದ್ರ ಸರ್ಕಾರ ಸಭೆ ನಡೆಸಲು ಮುಂದಾಗಿದ್ದು, ಈಗಾಗಲೇ ಆಹ್ವಾನ ಕಳುಹಿಸಿದೆ.

ಜೂನ್ 24ರ ಸಭೆಯಲ್ಲಿ ಭಾಗವಹಿಸುವಂತೆ ದೆಹಲಿಯಿಂದ ದೂರವಾಣಿ ಕರೆ ಬಂದಿದೆ. ಈ ಬಗ್ಗೆ ಪಕ್ಷದ ಸದಸ್ಯರ ಜತೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಿದ್ದೇನೆ ಎಂದು ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಈಗಾಗಲೇ ತಿಳಿಸಿದ್ದಾರೆ.

ಪಿಡಿಪಿ ಕೂಡ ಪಿಎಜಿಡಿ (ಪೀಪಲ್ಸ್ ಅಲಯನ್ಸ್ ಫಾರ್ ಗುಪ್ಕಾರ್ ಡಿಕ್ಲರೇಷನ್) ಮೈತ್ರಿಕೂಟದ ಸದಸ್ಯ ಪಕ್ಷವಾಗಿದೆ. ನ್ಯಾಷನಲ್ ಕಾನ್ಫರೆನ್ಸ್ ಸೇರಿದಂತೆ ಇತರ ರಾಜಕೀಯ ಪಕ್ಷಗಳಿಗೆ ಆಹ್ವಾನ ದೊರೆತಿದೆಯೇ ಎಂಬ ಬಗ್ಗೆ ಮಾಹಿತಿ ಇಲ್ಲ ಎಂದೂ ಮುಫ್ತಿ ಹೇಳಿದ್ದಾರೆ.

ಸಭೆಯಲ್ಲಿ ಭಾಗವಹಿಸುವಂತೆ ಕೇಂದ್ರದಿಂದ ಈವರೆಗೆ ಯಾವುದೇ ಆಹ್ವಾನ ಬಂದಿಲ್ಲ. ಸಭೆಯಲ್ಲಿ ಏನೇನು ಚರ್ಚಿಸಬೇಕು ಎಂಬ ಕುರಿತು ನಾವು ಮೊದಲು ಚರ್ಚೆ ನಡೆಸಲಿದ್ದೇವೆ ಎಂದು ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ (ಅಬ್ದುಲ್ಲಾ ಅವರು ಪಿಎಜಿಡಿ ಮೈತ್ರಿಕೂಟದ ಅಧ್ಯಕ್ಷರೂ ಆಗಿದ್ದಾರೆ) ತಿಳಿಸಿದ್ದಾರೆ.

ಬಿಜೆಪಿ ಮತ್ತು ಕಾಂಗ್ರೆಸ್‌ನ ಜಮ್ಮು–ಕಾಶ್ಮೀರ ಘಟಕಗಳ ನಾಯಕರೂ ಸಭೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.