ADVERTISEMENT

ಜಮ್ಮು ಮತ್ತು ಕಾಶ್ಮೀರದ ಅಭಿವೃದ್ಧಿ ಕಾರ್ಯ ನಿಲ್ಲದು: ಗೃಹ ಸಚಿವ ಅಮಿತ್‌ ಶಾ ಭರವಸೆ

ಪಿಟಿಐ
Published 30 ಮೇ 2025, 9:15 IST
Last Updated 30 ಮೇ 2025, 9:15 IST
   

ಪೂಂಚ್/ ಜಮ್ಮು: ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದಲ್ಲಿ ಆರಂಭವಾದ ಜಮ್ಮು ಮತ್ತು ಕಾಶ್ಮೀರದ ಅಭಿವೃದ್ಧಿ ನಿಲ್ಲುವದೂ ಇಲ್ಲ, ನಿಧಾನವಾಗುವುದೂ ಇಲ್ಲ. ಭಾರತಕ್ಕೆ ಹಾನಿ ಮಾಡಲು ಯತ್ನಿಸಿದವರು ಬಲವಾದ ಮತ್ತು ಪರಿಣಾಮಕಾರಿ ಆಘಾತವನ್ನೇ ಎದುರಿಸಲಿದ್ದಾರೆ ಎಂದು ಗೃಹ ಸಚಿವ ಅಮಿತ್ ಶಾ ಎಚ್ಚರಿಸಿದರು.

ಶುಕ್ರವಾರ ಜಮ್ಮು ಮತ್ತು ಕಾಶ್ಮೀರದ ಪೂಂಚ್‌ಗೆ ಭೇಟಿ ನೀಡಿರುವ ಶಾ, ಇತ್ತೀಚೆಗೆ ನಡೆದ ಕಹಿ ಘಟನೆಗಳಿಂದ ಕೇಂದ್ರಾಡಳಿತ ಪ್ರದೇಶದ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿದೆ. ಆದರೆ ಆದಷ್ಟು ಬೇಗ ಮತ್ತೆ ಮುಂದುವರಿಯಲಿದೆ ಎಂದರು.

ಇತ್ತೀಚೆಗೆ ನಡೆದ ಭಾರತ–ಪಾಕಿಸ್ತಾನ ಸಂಘರ್ಷದ ಸಮಯದಲ್ಲಿ ಭದ್ರತಾ ಪಡೆ, ನಾಗರಿಕರು ತೋರಿದ ಧೈರ್ಯವನ್ನು ಶ್ಲಾಘಿಸಿದ ಅವರು, ಹಿರಿಯ ಅಧಿಕಾರಿಗಳ ತ್ಯಾಗವನ್ನು ನೆನಪಿಸಿಕೊಂಡರು.

ADVERTISEMENT

2014ರಲ್ಲಿ ಮೋದಿಯವರು ಪ್ರಧಾನಿಯಾಗಿ ಕಚೇರಿಗೆ ಬಂದ ತಕ್ಷಣ ನಾಗರಿಕರನ್ನು ರಕ್ಷಿಸಲು ಗಡಿಗಳಲ್ಲಿ ಬಂಕರ್‌ಗಳನ್ನು ಸ್ಥಾಪಿಸುವ ಮಹತ್ವದ ನಿರ್ಧಾರ ಕೈಗೊಂಡಿದ್ದರು. ಇಲ್ಲಿಯವರೆಗೆ ಸುಮಾರು 9,500 ಬಂಕರ್‌ಗಳನ್ನು ನಿರ್ಮಾಣ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಬಂಕರ್‌ಗಳನ್ನು ಸ್ಥಾಪಿಸುವುದಾಗಿ ಶಾ ಹೇಳಿದರು.

ಇಡೀ ದೇಶ, ಸರ್ಕಾರ ಮತ್ತು ಜಮ್ಮು ಕಾಶ್ಮೀರ ರಾಜ್ಯದ ಜನರು ಕಲ್ಲಿನಂತೆ ನಿಮ್ಮೊಂದಿಗೆ ನಿಂತಿದ್ದೇವೆ. ಪಾಕಿಸ್ತಾನ ಮತ್ತು ಉಗ್ರರು ನಡೆಸಿದ ಕೃತ್ಯಗಳು ಭಾರತದ ರಕ್ಷಣಾ ನೀತಿಯನ್ನು ಇನ್ನಷ್ಟು ಬಲಗೊಳಿಸಿದೆ ಎಂದು ಗಡಿ ಪ್ರದೇಶದಲ್ಲಿರುವ ಜನರಿಗೆ ಧೈರ್ಯ ತುಂಬಿದರು.

ಪಾಕಿಸ್ತಾನದ ದಾಳಿಗೆ ತುತ್ತಾದ ಪೂಂಚ್‌ನ ವಿವಿಧ ಪ್ರದೇಶಗಳಿಗೆ ಶಾ ಭೇಟಿ ನೀಡಿದರು. ಹಾನಿಗೀಡಾದ ಮನೆ, ಉದ್ಯಮ ಮತ್ತು ಧಾರ್ಮಿಕ ಸ್ಥಳಗಳಿಗೆ ಕೇಂದ್ರ ಸರ್ಕಾರ ಶೀಘ್ರದಲ್ಲೇ ವಿಶೇಷ ಪ್ಯಾಕೇಜ್‌ ನೀಡುವುದಾಗಿ ಭರವಸೆ ನೀಡಿದರು. 

‘ಪಾಕ್‌ ದಾಳಿಯಲ್ಲಿ ಮೃತಪಟ್ಟವರ ಕುಟುಂಬ ಸದಸ್ಯರಿಗೆ ಈಗಾಗಲೇ ನೇಮಕಾತಿ ಪತ್ರವನ್ನು ನೀಡಲಾಗಿದೆ. ಕುಟುಂಬ ಸದಸ್ಯರನ್ನು ಕಳೆದುಕೊಂಡ ನಷ್ಟವನ್ನು ಭರಿಸುವುದು ಅಸಾಧ್ಯ, ಆದರೆ ಕುಟುಂಬದ ಹೊರೆಯನ್ನು ಹಂಚಿಕೊಳ್ಳುವ ಪ್ರಯತ್ನ ಮಾಡಿದ್ದೇವೆ’ ಎಂದು ಶಾ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.