ADVERTISEMENT

ಜಮ್ಮು–ಕಾಶ್ಮೀರ: ₹ 20,000 ಕೋಟಿ ಮೊತ್ತದ ಯೋಜನೆಗಳಿಗೆ ಮೋದಿ ಚಾಲನೆ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2022, 9:40 IST
Last Updated 24 ಏಪ್ರಿಲ್ 2022, 9:40 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ಶ್ರೀನಗರ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದುಪಡಿಸಿದ ನಂತರ ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಕಣಿವೆ ಪ್ರದೇಶಕ್ಕೆ ಭೇಟಿ ನೀಡಿದರು. ತಮ್ಮ ಭೇಟಿಯ ವೇಳೆ ₹ 20,000 ಕೋಟಿ ಮೊತ್ತದ ಯೋಜನೆಗಳಿಗೆ ಪ್ರಧಾನಿ ಚಾಲನೆ ನೀಡಿದರು.

ಈ ಬಳಿಕ ಜಮ್ಮುವಿನ ಪಲ್ಲಿಯಲ್ಲಿ ನಡೆದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಜಮ್ಮು–ಕಾಶ್ಮೀರದಲ್ಲೀಗ ತಳಹಂತದಲ್ಲಿಯೇ ಪ್ರಜಾಪ್ರಭುತ್ವವು ಕಾರ್ಯನಿರ್ವಹಿಸುತ್ತಿದೆ’ ಎಂದು ಹೇಳಿದರು.

‘ನಾನು ಇಲ್ಲಿನ(ಕಾಶ್ಮೀರ) ಯುವಕರಿಗೆ ಹೇಳಲು ಬಯಸುತ್ತೇನೆ. ನಿಮ್ಮ ಪೋಷಕರು ಹಾಗೂ ಅಜ್ಜ–ಅಜ್ಜಿಯಂದಿರು ಅನುಭವಿಸಿದ ಕಷ್ಟಗಳನ್ನು ನೀವು ಅನುಭವಿಸಬೇಕಿಲ್ಲ. ನಾವು ಇದನ್ನು ನಿಮಗೆ ಖಚಿತಪಡಿಸುತ್ತೇವೆ’ ಎಂದು ಪ್ರಧಾನಿ ಭರವಸೆ ನೀಡಿದರು.

ADVERTISEMENT

‘ಈ ಬಾರಿ ಪಂಚಾಯತ್ ರಾಜ್ ದಿನವನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಆಚರಿಸಲಾಗುತ್ತಿದೆ. ಇದು ದೊಡ್ಡ ಬದಲಾವಣೆಯನ್ನು ಸೂಚಿಸುತ್ತದೆ. ಇಲ್ಲಿ ಪ್ರಜಾಪ್ರಭುತ್ವವು ತಳಹಂತದಲ್ಲಿಯೇ ಕಾರ್ಯನಿರ್ವಹಿಸುತ್ತಿದೆ. ಇದು ಹೆಮ್ಮೆಯ ವಿಷಯ’ ಎಂದು ತಿಳಿಸಿದರು.

‘ಕೇಂದ್ರಾಡಳಿತ ಪ್ರದೇಶವು ಅಭಿವೃದ್ಧಿಯ ಹೊಸ ಚರಿತ್ರೆ ಬರೆಯಲು ಸಜ್ಜಾಗಿದೆ. ಸ್ವಾತಂತ್ರ್ಯದ ನಂತರದ ಏಳು ದಶಕಗಳ ಅವಧಿಯಲ್ಲಿ, ಜಮ್ಮು–ಕಾಶ್ಮೀರಕ್ಕೆ ಕೇವಲ ₹ 17,000 ಕೋಟಿಗಳ ಖಾಸಗಿ ಹೂಡಿಕೆ ಹರಿದುಬಂದಿತ್ತು. ಈಗ ಇಲ್ಲಿನ ಹೂಡಿಕೆ ಮೊತ್ತವು ₹ 38,000 ಕೋಟಿಗೆ ತಲುಪಿದೆ’ ಎಂದು ಮೋದಿ ಮಾಹಿತಿ ನೀಡಿದರು.

ಮೋದಿ ಭೇಟಿ ಹಿನ್ನೆಲೆಯಲ್ಲಿ ಜಮ್ಮು–ಕಾಶ್ಮೀರದಾದ್ಯಂತ ಭಾರಿ ಬಿಗಿ ಬಂದೋಬಸ್ತ್‌ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.