ಶ್ರೀನಗರ: ಕೊರೊನಾ ವೈರಸ್ ಭೀತಿಯಿಂದಾಗಿ ಜಮ್ಮು ಮತ್ತು ಕಾಶ್ಮೀರ ಸರ್ಕಾರವು ಬುಧವಾರ ಮುಂಜಾಗ್ರತಾ ಕ್ರಮವಾಗಿ ಪ್ರಸಿದ್ಧ ವೈಷ್ಣೊದೇವಿ ಯಾತ್ರೆಯನ್ನು ರದ್ದುಪಡಿಸಿದೆ.
ಬುಧವಾರದಿಂದಲೇ ವೈಷ್ಣೊದೇವಿ ಯಾತ್ರೆ ರದ್ದುಪಡಿಸಲಾಗಿದೆ. ಅಲ್ಲದೇ ಜಮ್ಮು ಮತ್ತು ಕಾಶ್ಮೀರವನ್ನು ಸಂಪರ್ಕಿಸುವ ಅಂತರರಾಜ್ಯ ಬಸ್ಗಳ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರ ಸರ್ಕಾರದ ವಕ್ತಾರರು ತಿಳಿಸಿದ್ದಾರೆ.
ಈಗಾಗಲೇ ಯಾತ್ರೆಯ ಆರಂಭಿಕ ಸ್ಥಳವಾದ ಕತ್ರಾ ವನ್ನು ತಲುಪಿರುವ ಯಾತ್ರಿಕರು ಹಾಗೂ ಪ್ರಸ್ತುತ ಯಾತ್ರೆ ಆರಂಭಿಸಿರುವ ಯಾತ್ರಿಕರು ಮುಂಜಾಗ್ರತೆಯನ್ನು ವಹಿಸಬೇಕು ಎಂದು ದೇವಸ್ಥಾನ ಸಮಿತಿ ಮನವಿ ಮಾಡಿದೆ.
ಎಲ್ಲೆಡೆ ಕೊರೊನಾ ವೈರಸ್ ಹರಡುತ್ತಿರುವ ಪರಿಣಾಮ ಯಾತ್ರೆಯನ್ನು ಮುಂದೂಡುವಂತೆ ಶ್ರೀಮಾತಾ ವೈಷ್ಣೊದೇವಿ ದೇವಸ್ಥಾನ ಮಂಡಳಿ ಮಂಗಳವಾರ ಮನವಿ ಮಾಡಿತ್ತು. ಅಲ್ಲದೇ ಯಾತ್ರಿಕರ ಸುರಕ್ಷತೆಗಾಗಿ ದೇವಸ್ಥಾನ ಮಂಡಳಿಯು ಮುಂಜಾಗ್ರತಾ ಕ್ರಮ ತೆಗೆದುಕೊಂಡಿದ್ದು, ಅಧುಕುವರಿ ಪ್ರದೇಶದ ಗುಹೆಯ ಪ್ರವೇಶವನ್ನು ನಿಷೇಧಿಸಿದೆ.
ಪೊಲೀಸ್ ಅಧಿಕಾರಿಗಳ ನಿಯೋಜನೆ: ಕೇಂದ್ರಾಡಳಿತ ಪ್ರದೇಶದ ವ್ಯಾಪ್ತಿಯಲ್ಲಿ ಕೊರೊನಾ ತಡೆಗಟ್ಟಲು ಜಿಲ್ಲಾಡಳಿತಕ್ಕೆ ನೆರವಾಗುವ ನಿಟ್ಟಿನಲ್ಲಿ 20 ಡಿವೈಎಸ್ಪಿಗಳನ್ನು ಸರ್ಕಾರ ನಿಯೋಜಿಸಿದೆ.ಈ ಕುರಿತು ಆದೇಶ ಹೊರಡಿಸಿರುವ ಗೃಹ ಇಲಾಖೆಯು, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯು ಜಿಲ್ಲಾ ಕೇಂದ್ರಗಳಲ್ಲಿ ಸ್ಥಾಪಿಸಿರುವ ಕೇಂದ್ರಗಳಲ್ಲಿ ಈ ಪೊಲೀಸ್ ಅಧಿಕಾರಿಗಳು ಉಳಿದುಕೊಂಡು, ಸೋಕಿತರ ಸಂಪರ್ಕ ವಿವರ ಪತ್ತೆ, ರೋಗ ಪೀಡಿತರು ಹಾಗೂ ಶಂಕಿತರನ್ನು ಪ್ರತ್ಯೇಕವಾಗಿ ಇರಿಸುವ ಕಾರ್ಯದಲ್ಲಿ ನೆರವಾಗುತ್ತಾರೆ ಎಂದು ಹೇಳಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.