
ಉಗ್ರರು
ಪ್ರಾತಿನಿಧಿಕ ಚಿತ್ರ
ಪೂಂಛ್/ಜಮ್ಮು: ಜಮ್ಮು ಮತ್ತು ಕಾಶ್ಮೀರದ ಪೂಂಛ್ ಜಿಲ್ಲೆಯ ಮೆಂಧರ್ನಲ್ಲಿ, ಭಯೋತ್ಪಾದಕನಿಗೆ ಸೇರಿದ್ದ ಸ್ಥಿರಾಸ್ತಿಯನ್ನು ಪೊಲೀಸರು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ (ಯುಎಪಿಎ) ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದರು.
ಮೆಂಧರ್ ಪೊಲೀಸರು ಮತ್ತು ಕಂದಾಯ ಇಲಾಖೆ ಅಧಿಕಾರಿಗಳ ಜಂಟಿ ತಂಡವು, ನಕ್ಕಾ ಮಜ್ಹರಿ ಪ್ರದೇಶದಲ್ಲಿರುವ ಕೃಷಿ ಜಮೀನನ್ನು ವಶಪಡಿಸಿಕೊಂಡಿದೆ. ಆಸ್ತಿಯ ಮಾರುಕಟ್ಟೆ ಮೌಲ್ಯ ₹10 ಲಕ್ಷ ಎಂದು ಅಂದಾಜಿಸಲಾಗಿದೆ.
ಇವು ಇಲ್ಲಿನ ನಿವಾಸಿ ರಫೀಕ್ ನಾಯ್ ಅಲಿಯಾಸ್ ಸುಲ್ತಾನ್ಗೆ ಸೇರಿದ ಆಸ್ತಿಯಾಗಿದೆ. ಇದೀಗ ಈತ ಪಾಕಿಸ್ತಾನದಲ್ಲಿದ್ದು, ಭಯೋತ್ಪಾದಕ ಕೃತ್ಯಗಳಲ್ಲಿ ತೊಡಗಿದ್ದಾನೆ. 9 ಕ್ರಿಮಿನಲ್ ಪ್ರಕರಣಗಳಲ್ಲಿ ಬೇಕಾಗಿರುವ ಈತನನ್ನು ‘ಭಯೋತ್ಪಾದಕ’ ಎಂದು ಘೋಷಿಸಲಾಗಿದೆ.
ರಫೀಕ್, ನಿಷೇಧಿತ ಭಯೋತ್ಪಾದನಾ ಸಂಘಟನೆ ತಹ್ರೀಕ್–ಉಲ್–ಮುಜಾಹಿದ್ದೀನ್ ಮತ್ತು ಜಮ್ಮು ಕಾಶ್ಮೀರ ಘಜ್ನವಿ ಪಡೆಯ ಹ್ಯಾಂಡ್ಲರ್ ಹಾಗೂ ಲಾಂಚ್ ಕಮಾಂಡರ್ ಆಗಿದ್ದಾನೆ. ಪೂಂಛ್ ಮತ್ತು ರಜೌರಿ ಪ್ರಾಂತ್ಯಗಳಲ್ಲಿ ಶಸ್ತ್ರಾಸ್ತ್ರ ಮತ್ತು ಮಾದಕ ವಸ್ತು ಕಳ್ಳಸಾಗಣೆ, ಒಳನುಸುಳುವಿಕೆ ಹಾಗೂ ಭಯೋತ್ಪಾದನಾ ಚಟುವಟಿಕೆಗಳಲ್ಲಿ ತೊಡಗಿದ್ದಾನೆ ಎಂಬುದು ತನಿಖೆಯಲ್ಲಿ ಪತ್ತೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.